ನೆನಪುಗಳು ‘ಕಾಡುವುದು’ ಏಕೆ?

8
364

ನಿನ್ನೊಂದಿಗೆ ಕಳೆದ ದಿನಗಳನ್ನು ಮರೆಯಲು ಸಾಧ್ಯವೇ? ನಿನ್ನ ಜತೆ ಕಳೆದ ಆ ಸುಂದರ ಸಂಜೆಯ ದಿನಗಳ ನೆನಪು ನನ್ನನ್ನು ಕಾಡುತ್ತಿದೆ

ಅಂತ ಗೆಳೆಯರು, ಗೆಳತಿಯರು ಪರಸ್ಪರ ಹೇಳಿಕೊಳ್ಳುವುದನ್ನು ಕೇಳಿರಬಹುದು. ಕನಿಷ್ಠ ಇಂದಿನ ಟಿವಿ ಧಾರಾವಾಹಿಗಳಲ್ಲಾದರೂ ಇಂಥ ದೃಶ್ಯಗಳು ಕಡ್ಡಾಯವಿರುತ್ತವೆ.

ಹಾಗಿದ್ದರೆ ಆ ಸುಂದರ ಸಂಜೆಯ ದಿನಗಳು ಮೈಮನವನ್ನು ಅರಳಿಸಬೇಕೇ ಹೊರತು ಕಾಡುತ್ತವೆ ಏಕೆ?

ಈ ಪ್ರಶ್ನೆ ನನ್ನ ತಲೆಯಲ್ಲಿ ಹಲವಾರು ದಿನಗಳಿಂದ ಕೊರೆಯುತ್ತಿದೆ.

ಹೌದು, ಆ ದಿನಗಳ ಮೆಲುಕು ಹಾಕಿದಾಗ ಖಂಡಿತವಾಗಿಯೂ ಅವುಗಳು ಎಷ್ಟೇ ಸುಮಧುರ ನೆನಪುಗಳಾಗಿರಲಿ, ಅವುಗಳು ಕಾಡುತ್ತವೆ.

ಇದಕ್ಕೆ ಕಾರಣಗಳೂ ಇಲ್ಲದಿಲ್ಲ. ಒಂದು ಮಾನವೀಯ ಸಂಬಂಧ, ಒಂದು ಆತ್ಮೀಯತೆಯ ಸ್ಪರ್ಶ, ಒಂದು ಸುಮಧುರ ಕ್ಷಣ, ಮಗದೊಂದು ಬಿಟ್ಟಿರಲಾಗದಷ್ಟು ಹತ್ತಿರವಾಗುವ ಆಪ್ತತೆ… ಇವುಗಳೆಲ್ಲಾ ದಿಢೀರ್ ಆಗಿ ಕಳಚಿಕೊಂಡರೆ…..?

ಇಂಥ ಪರಿಸ್ಥಿತಿ ಏರ್ಪಟ್ಟಾಗ ನಮ್ಮ ಆತ್ಮೀಯರೊಂದಿಗೆ ಕಳೆದ ಮಧುರ ಕ್ಷಣಗಳು ಜೀವನವಿಡೀ ಕಾಡಲಾರಂಭಿಸುತ್ತವೆ.

ಇಲ್ಲಿ ಮನಸ್ಸನ್ನು ಕಾಡುವ ಮತ್ತು ಮುದಗೊಳಿಸುವ ಎರಡೂ ಕ್ರಿಯೆಗಳ ಮೂಲಆಧಾರ ಒಂದೇ ಆಗಿರುತ್ತದೆ. ಅದುವೇ ಆತ್ಮೀಯತೆಯ, ಆಪ್ತತೆಯ ರಸನಿಮಿಷ.

ನಮಗರಿವಿಲ್ಲದಂತೆಯೇ ನಾವೊಬ್ಬರನ್ನು ನಮ್ಮವರಾಗಿಸಿಕೊಳ್ಳುತ್ತೇವೆ, ಅವರಿಗೆ ನಮ್ಮೆಲ್ಲ ಪ್ರೀತಿ, ವಾತ್ಸಲ್ಯವನ್ನು ಧಾರೆ ಎರೆದು ಅನುರಾಗದ ಹೊಳೆ ಹರಿಸುತ್ತೇವೆ. ಇಂಥವರು ಅದೊಂದು ದಿನ ಅದ್ಯಾವುದೋ ಕ್ಷುಲ್ಲಕ ಕಾರಣದ ನೆಪದಿಂದ ಕೈಯೆತ್ತಿ, ಕೈಬೀಸಿ ಮುನ್ನಡೆಯುತ್ತಾರೆ, ಅಥವಾ ಕಾರಣವೇ ಇಲ್ಲದೆ ಟಾಟಾ ಹೇಳುತ್ತಾರೆ. ಆಗ ಹೃದಯಕ್ಕಾಗುವ ಗಾಯವಿದೆಯಲ್ಲ…. ಅದೆಂದಿಗೂ ಮಾಸದು.

ಈ ಗಾಯವೇ ಕಾಡುವಿಕೆಗೆ ಹೇತುವಾಗುತ್ತದೆ. ಅದೊಂದು ದಿನ ಹೀಗೆಯೇ ಒಬ್ಬಂಟಿಯಾಗಿ ಕುಳಿತಾಗ ಅದೆಲ್ಲಿಂದಲೋ ಅವರು ನೆನಪಾಗುತ್ತಾರೆ. ಅಕ್ಷರಶಃ ನಮ್ಮೆದೆಗೂಡಿನ ಹೃದಯವಿರುವ ಭಾಗದಲ್ಲಿ ವಿದ್ಯುತ್ ಸಂಚಾರವಾದಂತೆ ನೋವಿನ ಛಳಕೊಂದು ಮಿಂಚಿ ಮಾಯವಾಗುತ್ತದೆ. ಹೃದಯ ಭಾರವಾಗುತ್ತದೆ. ಬಹುಶಃ ಪಕ್ಕದಲ್ಲಿ ಯಾರಾದರೂ ಇಲ್ಲದಿದ್ದಲ್ಲಿ ಕಣ್ಣು ಒದ್ದೆಯಾಗುತ್ತದೆ. ಕಳೆದುಹೋದ ಆ ರಸನಿಮಿಷಗಳು ಮತ್ತೆ ಬರಬಾರದೇ ಎಂದು ಮನಸ್ಸು ತುಡಿಯುತ್ತದೆ.

ಅಷ್ಟು ಆತ್ಮೀಯವಾಗಿದ್ದವರು, ಮೊಬೈಲ್, ಇ-ಮೇಲ್, ಚಾಟ್ ಮುಂತಾದ ಇಂದಿನ ಅತ್ಯಾಧುನಿಕ ಸಂವಹನ ವ್ಯವಸ್ಥೆಗಳಿರುವ ಯುಗದಲ್ಲೂ ಯಾವುದೇ ಸಂಪರ್ಕಕ್ಕೆ ಸಿಗದಷ್ಟು ದೂರವಾಗುವುದು ಸಾಧ್ಯವೇ ಎಂಬ ವೇದನೆಯೂ ಮನದೊಳಗೆ ಸುಳಿದುಕೊಳ್ಳುತ್ತದೆ.

ಗೆಳೆತನವನ್ನು ಬದಲಾಯಿಸಿದಂತೆಯೇ ಮೊಬೈಲ್ ಇದ್ದವರು ಅದರ ಸಿಮ್ ಕಾರ್ಡನ್ನು ಕೂಡ ಬದಲಾಯಿಸಿರುತ್ತಾರೆ. ಆದರೆ ಮೊಬೈಲ್ ಸೆಟ್‌ನಲ್ಲಿ ಎಸ್ಎಂಎಸ್ ಸಂದೇಶಗಳು, ಟೆಲಿಫೋನ್ ನಂಬರುಗಳು ಎಲ್ಲವೂ ಅಚ್ಚಳಿಯದೆ ಉಳಿದುಕೊಂಡಿರುವಂತೆಯೇ ಮನದ ಮೂಸೆಯಲ್ಲೂ ನೆನಪುಗಳು (memory) ಮಾಸಲಾರವು.

ಹಾಗಿದ್ದರೆ ಹೃದಯದ ಗಾಯಕ್ಕೆ ಮದ್ದಿಲ್ಲ ಅಂತ ಈ ಹಿಂದಿನ ಒಂದು ಪೋಸ್ಟಿನಲ್ಲಿ ಯೋಚಿಸಿದ್ದು ಸರಿಯಾಗಿಯೇ ಇದೆ ಅಂದಂತಾಯಿತು.

ಒಂದ್ಸಲ ಈ ಬಗೆಗೂ ಯೋಚಿಸಿ ನೋಡೋಣ….!

8 COMMENTS

  1. ಮದ್ದಿದೆ – ಕಾಲ, ಸದಾ ಬದಲಾಗುವ ಪ್ರಬುದ್ಧತೆ, ಹೊರಗಿನ ಒತ್ತಡ ಮುಂತಾದವುಗಳು ಎಂತಹ ಗಾಯವನ್ನೂ ಮಾಸುತ್ತೆ…ಆದರೆ ನೀವೇ ಹೇಳಿದಂತೆ ಗಾಢವಾದ ಮಾನವೀಯ ಸಂಬಂಧದ ಕುರುಹಾಗಿ ಗಾಯ ಮಾಗಿದರೂ ಕಲೆ ಯಾಗಿ ಎಂದೆಂದಿಗೂ ಉಳಿದುಬಿಡುತ್ತೆ. ಈ ಕಲೆಗಳು ಆಗಾಗೆ ನೆನಪಿನ ಸುರುಳಿಯನ್ನು ಬಿಚ್ಚಿದಾಗ ‘ಛೇ, ಹೀಗಾಯಿತಲ್ಲ!’ ಎನ್ನೋದೇ ‘ಕಾಡು’ವಿಕೆಯೇನೋ?

  2. ಹತ್ತಿರವಿಲ್ಲದೇ ದೂರವಾದಾಗಲೇ ನೆನಪುಗಳು ಕಾಡುವುದು. ಅದೇ ಹತ್ತಿರವಿದ್ದಾಗ ಈ ಭಾವನೆಗಳು ಲೇಶವೂ ವ್ಯಕ್ತವಾಗುವುದಿಲ್ಲ. ಇರುವುದೆಲ್ಲವ ಬಿಟ್ಟು ಇರದುದರ ಕಡೆಗೆ ತುಡಿಯುವುದೇ ಜೀವನ.

    ಬರಹ ಬಹಳ ಸುಂದರವಾಗಿದೆ. ನನ್ನನ್ನು ಕಾಡುವ ನೆನಪಾವುದೂ ಇಲ್ಲವಲ್ಲ ಎಂಬ ದು:ಖವೂ ಆಗುತ್ತಿದೆ.

  3. ಸತೀಶ್ ಅವರೆ,

    ಹೌದು, ಸಂಬಂಧಗಳ ಗಾಢತೆ ತೀವ್ರವಾಗಿದ್ದಷ್ಟೂ ‘ಕಾಡು’ವಿಕೆಯೂ ಅಷ್ಟೇ ತೀವ್ರವಾಗಿರುತ್ತದೆ.
    ಅದೊಂದು ಅಳಿಸಲಾಗದ ಕಲೆಯಾಗಿ ಉಳಿದುಬಿಡುತ್ತದೆ. ಇದಕ್ಕೆ ನಾವು ಒಗ್ಗಿಕೊಳ್ಳಬೇಕಷ್ಟೆ.

  4. ಶ್ರೀನಿವಾಸ್ ಅವರೆ,
    ನಿಮ್ಮ ಮಾತು ಒಪ್ಪತಕ್ಕದ್ದೇ. ದೂರದ ಬೆಟ್ಟ ಕಣ್ಣಿಗೆ ನುಣ್ಣಗೆ ಎಂಬಂತೆ ದೂರವಿದ್ದರೆ ಅದರ ಬಗೆಗಿನ ಆಸೆ, ಆಕಾಂಕ್ಷೆ ಜಾಸ್ತಿ. ಹತ್ತಿರವಿದ್ದರೆ ತೀರಾ ನಿರ್ಲಕ್ಷ್ಯ. ಇದು ಮಾನವನ ‘ಸಹಜ’ ಗುಣವೇ? ಬದಲಾಯಿಸಿಕೊಳ್ಳುವುದು ಸಾಧ್ಯವಿಲ್ಲವೇ?

  5. ತುಂಬಾ ಚೆನ್ನಾಗಿದೆ.ಇದು ನನ್ನ ಪ್ರತಿಯೊಬ್ಬರ್ ಜೀವನದಲ್ಲಿ ನೆಡೆಯವ ಗಟನೆ ಅನಿಸತ್ತೆ. ನನ್ನ ಜೀವನದಲ್ಲಿ ಈ ತರಹ ಗಟನೆ ನೆಡದಿವೆ.

    ಇತಿ.
    ಸಂತೊಷ್.

  6. ಸಂತೋಷ್ ಅವರಿಗೆ ಸಂತೋಷದ ಸ್ವಾಗತ.

    ಇಂಥ ಘಟನೆಗಳು ಘಟಿಸಿದರೆ ನೆನಪುಗಳು ಶಾಶ್ವತ.
    ಸವಿ ನೆನಪುಗಳಾದರೆ ಬದುಕು ಸವಿಯಾಗಬಹುದು.
    ಇಲ್ಲವಾದರೆ ಏನಿದ್ದರೂ ಕಹಿ 🙂

  7. ನೆನಪುಗಳು ‘ಕಾಡುವುದು’ ಏಕೆ? …. ನೆನಪುಗಳಾಗಿದ್ದಕ್ಕೆ ಅವು ಕಾಡುತ್ತವೆ. ಇಲ್ಲವಾದಲ್ಲಿ ಅವು ಅನುಭವಗಳು ಮಾತ್ರ ಆಗಿ ಮರೆಯಾಗಿ ಹೋಗುತ್ತಿದ್ದವು.. ಇನ್ನು ಹೃದಯದ ಗಾಯಕ್ಕೆ ಮದ್ದಿಲ್ಲ ಅಂದ್ರೆ …. ಅದು ಗಾಯದ ತೀವ್ರತೆ ಮತ್ತು ಗಾಯದ ಕಾರಣಗಳ ಮೇಲೆ ಅವಲಂಬಿತ.. ಅಷ್ಟಕ್ಕೂ ಗಾಯ ವಾಸಿಯೇ ಆಗಲಿಲ್ಲ ಅಂದ್ರೆ ಇದ್ದೆ ಇದೆಯಲ್ಲ ನಮ್ಮ “ಸುಕೃತಂ” … ಇಲ್ಲಿ ಎಲ್ಲದಕ್ಕೂ ಮೆಡಿಸಿನ್ಸ್ ಇದೆ !!!!!

  8. ಶಮ, ಸುಕೃತಂ ಇರೋದು ನಮ್ಮ ಸುಕೃತವೂ ಇರಬಹುದು. ಖಂಡಿತಾ ಮೆಡಿಸಿನ್ಸ್ ಜಾಲಾಡುವೆ.. 🙂

LEAVE A REPLY

Please enter your comment!
Please enter your name here