ಬಂದಿದೆ ಜನವರಿ, ಮಾಡ್ಕೋಬೇಡಿ ವರಿ!

0
412

[ವಿಜಯ ಕರ್ನಾಟಕದಲ್ಲಿ ಪ್ರಕಟವಾದ ನನ್ನ ಲೇಖನ]

ನಿಮ್ ಕೈಲಾಗೋ ಹೊಸ ವರ್ಷ ನಿರ್ಣಯಗಳಿಲ್ಲಿವೆ
ದೇಹವೂ ಸ್ವಸ್ಥ, ದೇಶವೂ ಸ್ವಚ್ಛ

ಹೇಳದೇ ಕೇಳದೇ ಮತ್ತೊಂದು ಜನವರಿ 1 ಬಂದಿದೆ. ಅಂಥದ್ದೊಂದು ದಿನಾಂಕ ಇಷ್ಟು ಬೇಗ ಬರುತ್ತದೆಯೆಂಬುದು ನನಗೇನು ಗೊತ್ತು? ಮೊನ್ನೆಯಷ್ಟೇ ನಾನೊಂದು ಶಪಥ ಮಾಡಿದ್ದು ನೆನಪಿದೆ. ಇನ್ನೇನು ಅದನ್ನು ಪೂರೈಸುವ ಪ್ರಯತ್ನ ‘ಆರಂಭಿಸೋಣ’ ಅಂದುಕೊಳ್ಳುತ್ತಿರುವಾಗಲೇ, ಅದಾಗಲೇ ಮತ್ತೆ ಹೊಸ ವರ್ಷ ಬಂದೇಬಿಟ್ಟಿತಲ್ಲ! ಕಾಲ ಯಾರನ್ನೂ ಕಾಯುವುದಿಲ್ಲ ಅಂತ ನನಗೀಗ ಗೊತ್ತಾಗಿದೆ. ಇನ್ನಾದರೂ ಹೊಸ ವರ್ಷದ ನಿರ್ಣಯವನ್ನು ಕೈಗೊಂಡಂದಿನಿಂದಲೇ ಸಾಧಿಸುವ ಪ್ರಯತ್ನಕ್ಕೆ ಮುಂದಾಗಬೇಕು ಅಂದುಕೊಳ್ಳುವುದು ಪ್ರತಿ ವರ್ಷದ ಕಾರ್ಯಕ್ರಮವಾಗಿಬಿಟ್ಟಿದೆಯೇ? ಹೊಸ ವರ್ಷದ ರೆಸೊಲ್ಯುಶನ್ ಕೈಗೊಳ್ಳಲು ಇಲ್ಲೊಂದು ಸುಲಭ ಮಾರ್ಗವಿದೆ. ಇದರಿಂದ ದೇಹವೂ, ದೇಶವೂ ಕೊಂಚ ಮಟ್ಟಿಗೆ ಸ್ವಸ್ಥವಾಗುವುದು ಗ್ಯಾರಂಟಿ.

ಬೇರೇನೇ ಶಪಥ ಮಾಡಿದರೂ ಪೂರ್ಣಗೊಳಿಸುವುದು ಅಷ್ಟರಲ್ಲೇ ಇದೆ. ಹೀಗಾಗಿ ದೇಶವನ್ನು ವ್ರಣದಂತೆ ಕಾಡುತ್ತಿರುವ ಭ್ರಷ್ಟಾಚಾರವನ್ನು ಗುಡಿಸಿ ಕಸ ತೆಗೆಯಲು ಪೊರಕೆ ಹಿಡಿದು ಒಂದಿಷ್ಟು ಪ್ರಯತ್ನಿಸಬಾರದೇಕೆ?

ಭ್ರಷ್ಟಾಚಾರ ವಿರೋಧಿಸಿ ಅಣ್ಣಾ ಹಜಾರೆ ನಡೆಸುತ್ತಿರುವ ದೇಶವ್ಯಾಪಿ ಆಂದೋಲನಕ್ಕೆ ಪೂರಕವಾಗಿ ಏನನ್ನಾದರೂ ಮಾಡಿ, ಅದಕ್ಕೆ ಕೊಂಚವಾದರೂ ಅಳಿಲು ಸೇವೆ ನಡೆಸೋಣ ಅಂತ ಪ್ಲ್ಯಾನ್ ಹಾಕಿಕೊಳ್ಳಿ. ಈ ಬಾರಿ ಒಬ್ಬನಾದರೂ ಭ್ರಷ್ಟಾಚಾರಿಯನ್ನು ಕಾನೂನಿನ ಕಬಂಧ ಬಾಹುಗಳಡಿ ಸಿಲುಕಿಸಿಯೇ ತೀರುತ್ತೇನೆ ಅಂತ ಶಪಥ ಮಾಡಿ ನೋಡೋಣ. ನಿಮ್ಮ ಧೈರ್ಯ, ಸ್ಥೈರ್ಯ, ಸಾಹಸ ಪ್ರವೃತ್ತಿಗಳು ನಿಮ್ಮ ನೆರವಿಗೆ ಬಂದೇ ಬರುತ್ತವೆ. ಒಂದಾದ ಮೇಲೊಂದರಂತೆ ನಿರ್ಣಯಗಳನ್ನು ಕೈಗೊಳ್ಳಲು ಸಾಕಷ್ಟು ಅವಕಾಶಗಳಿವೆ.

* ನಿಮ್ಮ ಮನೆಯಲ್ಲಿ ಶಾಲೆಗೆ ಹೋಗುವ ಮಕ್ಕಳಿದ್ದರೆ, ಅಲ್ಲಿಂದಲೇ ಆರಂಭಿಸಿ. ಬೇಕಾಬಿಟ್ಟಿಯಾಗಿ ಆ ಶುಲ್ಕ-ಈ ಶುಲ್ಕ ಹೆಸರಿನಲ್ಲಿ ಹಣ ಸುಲಿಯುವ ಶಾಲೆಗಳು ಬೋಧನಾ ಶುಲ್ಕ ಹೆಸರಿನಲ್ಲಿಯೋ, ಕಟ್ಟಡ ಅಭಿವೃದ್ಧಿ ಎಂಬ ನೆಪದಲ್ಲೋ ಏನೇನೋ ಸಬೂಬು ಹೇಳಿಯೋ ವಂತಿಗೆ ಸಂಗ್ರಹಿಸುತ್ತವಲ್ಲ… ಅಂಥವರಿಗೆ ಕಾನೂನಿನ ಚುರುಕು ಮುಟ್ಟಿಸುತ್ತೇವೆ ಅಂತ ಒಂದು ನಿರ್ಣಯ ಕೈಗೊಳ್ಳಿ. ಶಾಲೆಗೆ ಏನೇ ದುಡ್ಡು ಕೊಟ್ಟರೂ ರಶೀದಿ ಪಡೆಯಲು ಮರೆಯಬೇಡಿ. (ಕೆಎಸ್ಸಾರ್ಟಿಸಿ ಬಸ್ಸುಗಳಲ್ಲಿ ಹಾಕಿರುತ್ತಾರಲ್ಲ…. ‘ಚೀಟಿ ಕೇಳಿ ಪಡೆಯಿರಿ’, ಅದನ್ನು ಎಲ್ಲ ಕಡೆ ಅನುಸರಿಸಿಬಿಡಿ!) ಈ ರಶೀದಿಯೇ ನಿಮಗೆ ಅಸ್ತ್ರ. ಅದನ್ನೇ ಹಿಡಿದುಕೊಂಡು ನೀವು ನ್ಯಾಯಾಲಯದ ಮೊರೆಯನ್ನೂ ಹೋಗಬಹುದು.

* ಇನ್ನು, ಎಲ್ಲ ದಾಖಲೆ ಪತ್ರಗಳು ಸರಿಯಾಗಿದ್ದರೂ, ವಾಹನ ಸವಾರರನ್ನು ರಸ್ತೆಯ ಮೂಲೆಗೆ ಬರುವಂತೆ ತಡೆದು ನಿಲ್ಲಿಸಿ, ಅತಿ ವೇಗವಾಗಿ ಗಾಡಿ ಓಡಿಸುತ್ತಿದ್ದೀ ಅಂತೆಲ್ಲಾ ಹೇಳಿ, ‘ಚಾ ಕುಡಿಯಲು ಒಂದಿಷ್ಟು ಕೊಟ್ಟರೆ ಬಿಡ್ತೀವಿ, ಇಲ್ಲಾಂದ್ರೆ, ಏನಾದರೂ ರಶೀದಿ ಬರೆದುಬಿಟ್ರೆ ಕನಿಷ್ಠ ಸಾವಿರ ರೂಪಾಯಿ ದಂಡ ಕಟ್ಟಬೇಕಾಗುತ್ತದೆ’ ಅಂತ ಬೆದರಿಸೋ ಟ್ರಾಫಿಕ್ಕು ಪೊಲೀಸರಿಗೊಂದು ಪಾಠ ಕಲಿಸಿಯೇ ತೀರುತ್ತೇನೆ ಅಂತ ಕೂಡ ನಾವೊಂದು ‘ಗುರಿ’ ಇರಿಸಿಕೊಳ್ಳಬಹುದು. ಅದರ ಮಧ್ಯೆ, ‘ಸಾವ್ಕಾರ್ರು ಜೀಪಿನಲ್ಲಿ ಕೂತಿದ್ದಾರೆ, ನಂಗೇನೋ ನಡೆಯುತ್ತೆ, ಅವರಿಗೆ ಸಾಕಾಗಲ್ಲ’ ಅಂತ ಹೆಚ್ಚು ಪೀಕಿಸುವ ಪ್ರಯತ್ನವೇನಾದರೂ ಮಾಡಿದರಂತೂ ನಿಮಗೆ ನಿಮ್ಮ ಶಪಥ ಪೂರೈಸುವ ಅವಕಾಶ ದುಪ್ಪಟ್ಟಾಗಿಬಿಡುತ್ತದೆ ಅಂತ ಹೆಮ್ಮೆ ಪಟ್ಟುಕೊಂಡು ಮುಂದುವರಿದುಬಿಡಿ.

* ಔಷಧಿಯಲ್ಲೋ, ದಿನ ಬಳಕೆ ವಸ್ತುಗಳಲ್ಲೋ, ಎಂಆರ್‌ಪಿ (ಗರಿಷ್ಠ ಮಾರಾಟ ಬೆಲೆ)ಗಿಂತ ಹೆಚ್ಚು ದುಡ್ಡು ಕೀಳುವ ಪರಿಸ್ಥಿತಿಯೇನಾದರೂ ನಿಮಗೆ ಎದುರಾದರಂತೂ ನಿಮ್ಮ ಛಾನ್ಸ್! ಅದೇ ಮೊತ್ತಕ್ಕೆ ಬಿಲ್ ಕೇಳಿದಲ್ಲಿ ನಿಮ್ಮ ‘ಶಪಥ’ ಪೂರೈಸುವ ಕೆಲಸವಂತೂ ಸಿಕ್ಕಾಪಟ್ಟೆ ಸುಲಭವಾಗಿಬಿಡುತ್ತದೆ.

* ಸಾರಿಗೆ ಕಚೇರಿಗೆ ಹೋಗಿ ಕಲಿಕಾ ಪರವಾನಗಿಯೋ, ಅಥವಾ ಪೂರ್ಣ ಲೈಸೆನ್ಸ್ ಮಾಡಿಸಲು ಹೋಗುತ್ತೀರೆಂದುಕೊಳ್ಳಿ. ಅಲ್ಲಿ ಇಂಥಾ ಕೆಲಸಕ್ಕೆ ಇಂತಿಷ್ಟು ಅಂತ ಪಟ್ಟಿಯಲ್ಲಿ ಶುಲ್ಕದ ಮೊತ್ತ ಬರೆದಿರುತ್ತಾರೆ. ಅದಕ್ಕಿಂತ ಹೆಚ್ಚು ಹಣ ತೆರುವ ಪರಿಸ್ಥಿತಿ ಬಂದಿತೇ? ಅದನ್ನು “ಸಾಹೇಬ್ರ ಕೊಠಡಿಗೆ” ಸಹಿಗಾಗಿ ಕಳುಹಿಸುವ ಜವಾನನೊಬ್ಬ, ಅದ್ಯಾವುದೋ ಮುದ್ರಿತ ಸ್ಟ್ಯಾಂಪ್ ಅಥವಾ ಇನ್ನೇನನ್ನೋ ತೋರಿಸಿ, ಇದಕ್ಕೆ ಇಪ್ಪತ್ರೂಪಾಯಿ ಆಗುತ್ತೆ ಅಂತ ಹಣ ಕೀಳಲು ಪ್ರಯತ್ನಿಸಿದ ಅಂದುಕೊಳ್ಳಿ. ಸಂದೇಹವೇ ಬೇಡ, ಅತ ಬೇರಾರೂ ಅಲ್ಲ, ಪರಮ ಭ್ರಷ್ಟಾಚಾರಿಯೇ! ನಿಮ್ಮ ಹೊಸ ವರ್ಷದ ಪ್ರತಿಜ್ಞೆ ಪೂರೈಸಿದಂತೆಯೇ ಅಲ್ಲವೇ? ಆ ಕೆಲಸವನ್ನು ಅದೆಷ್ಟು ಸುಲಭವಾಗಿಸಿದ ಪುಣ್ಯಾತ್ಮ!

* ಸರಕಾರದಿಂದ ನಿಮಗೇನಾದರೂ ಸವಲತ್ತು ದೊರೆಯುತ್ತದೆ ಎಂದುಕೊಳ್ಳೋಣ. ಅಂಗ ಊನತೆಯುಳ್ಳವರಿಗೋ, ಕಡಿಮೆ ಆದಾಯದವರಿಗೋ, ಅನಾಥ ಕುಟುಂಬದವರಿಗೋ, ರೈತರಿಗೋ… ಹೀಗೆ ನಾನಾ ಸವಲತ್ತುಗಳು ಇರುತ್ತವೆ. ಇದನ್ನು ಕೊಡಿಸಿ ಅಂತ ನೀವು ನಿಮ್ಮನ್ನಾಳುವ ಜನಪ್ರತಿನಿಧಿಯನ್ನು ಕೇಳಿದಾಗ, ಆತ ‘ಈ ಅರ್ಜಿ ನೋಡ್ಕೊಳಪ್ಪಾ’ ಅಂತ ತಮ್ಮ ಆಪ್ತ ಕಾರ್ಯದರ್ಶಿಗೆ ಹೇಳಬಹುದು. ನೀವು ಕೆಲಸವಾಯಿತೆಂದು ಸಂಭ್ರಮಿಸುತ್ತಿದ್ದರೆ, ನಿಮ್ಮ ಕೈಗೆ ಬಂದ ಚೆಕ್ ಮೊತ್ತದ ಹಣವು ಅದೆಲ್ಲೋ ‘ಫಿಲ್ಟರ್’ ಆಗಿ ಬಂದಿರುತ್ತದೆ. ಅದು ಗಮನಕ್ಕೆ ಬಂತೋ…. ನಿಮ್ಮಷ್ಟು ಲಕ್ಕಿ ಬೇರಾರೂ ಇಲ್ಲ. ಒಬ್ಬ ಭ್ರಷ್ಟಾಚಾರಿ ಕೈಗೆ ಸಿಕ್ಕ ಹಾಗೆಯೇ!

* ಇನ್ನು, ಸರಕಾರದಿಂದ ದೊರೆಯುವ ಪ್ರಶಸ್ತಿಗಳು ಇರುತ್ತವಲ್ಲಾ… ಸಿಕ್ಕಾಪಟ್ಟೆ ಲಾಬಿ ಮಾಡಿಸಿ, ತಮಗೆ ಸಂಬಂಧವೇ ಇಲ್ಲದ ಯಾವ್ಯಾವುದೋ ಕೆಟಗರಿಯ ರಾಜ್ಯ ಪ್ರಶಸ್ತಿಯನ್ನು ತಮ್ಮ ಹೆಸರಿಗೆ ಬರೆಸಿಕೊಳ್ಳುವಲ್ಲಿ ಸಫಲರಾಗಿರುವ ವ್ಯಕ್ತಿಯ ಬಗ್ಗೆ ನಿಮಗೆ ಆಕಸ್ಮಿಕವಾಗಿ ಗೊತ್ತಾಗಿಬಿಟ್ಟರೂ, ಇಲ್ಲೂ ನಿಮ್ಮ ಶಪಥ ಈಡೇರಿಸುವ ಅವಕಾಶದ ಹೆಬ್ಬಾಗಿಲೊಂದು ತೆರೆದಂತೆಯೇ ಆಯಿತಲ್ಲಾ! (ಇದರಲ್ಲಿ, ಪ್ರಶಸ್ತಿಯ ಹಣ ಬಾರದಿದ್ದರೂ ಚಿಂತಿಲ್ಲ, ಪ್ರಶಸ್ತಿಯಂತೂ ಸಿಗಲಿ ಅಂತ ಉಡಾಫೆ ಭಾವನೆಯೊಂದಿಗೆ ಆ ಹಣವನ್ನು ತಾವಾಗಿಯೇ ಸುಲಭವಾಗಿ ‘ಫಿಲ್ಟರ್’ ಆಗಿಸುವವರೂ ಸಿದ್ಧಿ-ಪ್ರಸಿದ್ಧಿಗಾಗಿ ಮಾಡುವಂತಹವರೂ ಸೇರುತ್ತಾರೆಂಬುದು ನೆನಪಿರಲಿ!)

* ನಿಮ್ಮ ಮನೆಗೆ ವಿದ್ಯುತ್ ಸಂಪರ್ಕ ಬೇಕೆಂದರೆ ಮೆಸ್ಕಾಂ, ಬೆಸ್ಕಾಂ, ಹೆಸ್ಕಾಂ… ಇತ್ಯಾದಿಗಳ ‘ಸ್ಕಾಂ’ ಅಧಿಕಾರಿ-ನೌಕರರಿಗೆ ನೀವು ಇಂತಿಷ್ಟು ಕೊಡಬೇಕಾದ ‘ಸ್ಕ್ಯಾಮ್’ನ ಪರಿಸ್ಥಿತಿ ಬಂದಿತೇ? ನಿಮ್ಮ ಹೊಸವರ್ಷದ ನಿರ್ಣಯ ಈಡೇರಿಸುವ ಕಾಲ ಬಂದಿದೆ ಅಂತಲೇ ಅರ್ಥ!

* ನಗರ ಪ್ರದೇಶದಲ್ಲಾದರೆ, ತೀರಾ ತಳ ಮಟ್ಟದ ಭ್ರಷ್ಟಾಚಾರಿಯನ್ನು ಹೇಗೆ ಪತ್ತೆ ಹಚ್ಚಬಹುದು? ನಿಮ್ಮ ಮನೆಯ ಬಳಿಗೆ ಕಸ ಒಯ್ಯುವ ಪಾಲಿಕೆ ಲಾರಿಯೋ, ತ್ರಿಚಕ್ರ ವಾಹನವೋ ಬರುತ್ತದೆ. ತಿಂಗಳಾರಂಭದಲ್ಲಿ ನಿಮ್ಮ ಮನೆಗೆ ಹಾಜರಾಗುವ ಅವರು, ತಿಂಗಳ ಮಾಮೂಲಿಗಾಗಿ (ಒಂದು ಮನೆಗೆ ಕನಿಷ್ಠ ಹತ್ರೂಪಾಯಿ) ಕೈಚಾಚುತ್ತಾರೆ. ಸರಕಾರದಿಂದಲೋ, ಕಸ ವಿಲೇವಾರಿ ಏಜೆನ್ಸಿಯ ಕೈಯಲ್ಲೋ ಸಂಬಳ ಪಡೆಯುವ ಇವರ ಈ ದಂಧೆ ಕೂಡ ಭ್ರಷ್ಟಾಚಾರವೇ ಸ್ವಾಮೀ! ಅಷ್ಟೂ ಗೊತ್ತಾಗಲಿಲ್ಲವೇ? ಸಿಕ್ಕಿಯೇ ಬಿಟ್ಟಿತಲ್ಲ ಪಾಪದ ಮಿಕ! ಆದರೆ, ದುಡಿದು ತಿನ್ನುವ ಇವರ ಭ್ರಷ್ಟಾಚಾರಕ್ಕಿಂತ ಫೈಲ್‌ಗೆ ಸಹಿ ಹಾಕಲು ತಿಂದುಂಡು ಕೋಟಿ ಕೋಟಿ ನುಂಗುವ ಭ್ರಷ್ಟಾಚಾರಿಗಳನ್ನೇ ಹಿಡಿಯುವುದು ನಿಮ್ಮ ಧ್ಯೇಯವಾಗಿಟ್ಟುಕೊಂಡಿದ್ದೀರಾ? ಅದಕ್ಕಂತೂ ಫುಲ್ ಮಾರ್ಕ್ಸ್ ಸಿಗುತ್ತೆ!

* ನಿಮ್ಮೂರಿನ ರಸ್ತೆ ಹಾಳಾಗಿದೆ. ಅದರ ದುರಸ್ತಿಗಾಗಿ ಊರಿನ ಜನರೆಲ್ಲಾ ನಿಮ್ಮನ್ನು ಲೋಕಸಭೆಯಲ್ಲೋ, ರಾಜ್ಯಸಭೆಯಲ್ಲೋ, ವಿಧಾನಸಭೆಯಲ್ಲೋ ಪ್ರತಿನಿಧಿಸುವ ‘ಜನ ನಾಯಕರಿಗೆ’ ಮನವಿ ಸಲ್ಲಿಸಿದ್ದಾಗಿದೆ. ಅವರು ಊರಿನ ಕಾರ್ಯಕ್ರಮದ ಭಾಷಣವೊಂದರಲ್ಲಿ, ನಿಮ್ಮೂರಿನ ರಸ್ತೆಗೆ ಹಣ ಮಂಜೂರಾಗಿದೆ ಅಂದು ಬಿಡ್ತಾರೆ. ಮರುದಿನವೇ ಒಂದಷ್ಟು ರೋಡ್ ರೋಲರುಗಳು, ಜಲ್ಲಿ-ಡಾಂಬರುಗಳೊಂದಿಗೆ ಬಂದು ಸದ್ದು ಮಾಡಿ ಹೋಗುತ್ತವೆ. ಒಂದೇ ಒಂದು ಮಳೆ ಬಂದಾಗ, ಈ ರಸ್ತೆಗೆ ಅವರು ಹಾಕಿದ ‘ನಾಮ’ ಎಂಥದ್ದೆಂದು ಬಯಲಾಗಿಬಿಡುತ್ತದೆ. ರಸ್ತೆಯೊಳಗೆ ಜಲ್ಲಿಯೋ, ಜಲ್ಲಿಯ ನಡುವೆ ರಸ್ತೆಯೋ ಎಂದು ತಿಳಿಯದಾಗದ ಪರಿಸ್ಥಿತಿ. ಹಿಡಿಯಿರಿ ಈ ರಸ್ತೆ ಕಾಮಗಾರಿ ಗುತ್ತಿಗೆ ಪಡೆದವರನ್ನು! ಒಂದಷ್ಟು ಸಾಹಸ ಮಾಡಿದರೆ, ಜನ್ಮ ಜನ್ಮಾಂತರದ ಪುಣ್ಯ ನಿಮ್ಮದಾಗುತ್ತದೆ!

* ಇನ್ನೂ ಒಂದಿದೆ. ಹಳ್ಳಿಗಳಲ್ಲಿ ರೈತರು ಕಷ್ಟಪಟ್ಟು ದುಡಿಯುತ್ತಾರೆ. ಅವರು ಬೆಳೆದ ಬೆಳೆಗೆ ಮಾರುಕಟ್ಟೆಯಲ್ಲಿ ಸಿಕ್ಕಾಪಟ್ಟೆ ದರ ಇರುತ್ತದೆ. ಆದರೆ ನೀವು ಬೆವರು ಸುರಿಸಿ ಬೆಳೆದ ಫಸಲಿಗೆ ಅಸಲು ಬಂದರೆ ನಿಮ್ಮ ಪುಣ್ಯ. ಅರೆ, ನಾನು ಕಷ್ಟಪಟ್ಟು ಸಂಪಾದಿಸಬೇಕಿರುವ ದುಡ್ಡನ್ನು ನುಂಗೋ ನುಂಗಣ್ಣಗಳು ಯಾರು ಅಂತ ತಲೆ ಕೆರೆದುಕೊಂಡಿರಾ? ಅದೋ ಒಂದು ಅವಕಾಶದ ಮರದ ಬಾಗಿಲು ಕಿರ್ರನೇ ತೆರೆದುಕೊಂಡಂತಾಯಿತೆಂದೇ ಅರ್ಥ. ಹೇಗೂ ಜೀವನಪೂರ್ತಿ ಕಷ್ಟಪಡುತ್ತಲೇ ಇದ್ದೀರಿ, ಮತ್ತೊಂದಿಷ್ಟು ತ್ರಾಸ ತೆಗೆದುಕೊಂಡು ಹಿಡೀರಿ ಅವರನ್ನು! ನಿಮ್ಮ ಹೊಸ ವರ್ಷದ ನಿರ್ಣಯದ ತೂಕ ಮತ್ತಷ್ಟು ಹೆಚ್ಚಾಗುತ್ತದೆ.

* ಸುಖಾ ಸುಮ್ಮನೆ ಓಟು ಪಡೆದುಕೊಂಡು ಐದೂ ವರ್ಷಗಳ ಕಾಲ ಏನೂ ಮಾಡಲಾರದೆ, ಕೇಂದ್ರದಿಂದ ಬರುವ ಕೋಟ್ಯಂತರ ರೂಪಾಯಿ ಹಣವನ್ನು, ರಾಜ್ಯದಿಂದಲೂ ಬರುವ ಹಣವನ್ನು ಹಾಗೆಯೇ ಹಿಂದಕ್ಕೆ ಕಳುಹಿಸುವಂತಹಾ, ತಮ್ಮದೇ ಉದ್ಯೋಗದಲ್ಲಿಯೇ ಬಿಜಿಯಾಗಿಬಿಟ್ಟಿರುವ ‘ಸ್ವಕಾರ್ಯ ನಿರತ’ ಸಂಸದರು, ಶಾಸಕರು ನಿಮ್ಮೂರಿನವರೇ? ನಿಮ್ಮ ಕೆಲಸ ಮತ್ತಷ್ಟು ಸುಲಭವಾಗಿಬಿಟ್ಟಿತು. ನೀವು ಓಟು ಕೊಟ್ಟು ಅವರನ್ನು ಆರಿಸಿ ಕಳುಹಿಸಿದ್ದೀರಿ, ಅವರನ್ನು ಪ್ರಶ್ನಿಸುವ ಹಕ್ಕು ನಿಮಗಿದೆ. ಯಾವುದೇ ಸಭೆ-ಸಮಾರಂಭಗಳಲ್ಲಿ ಅವರು ‘ಓಟು-ಪ್ರಚೋದಕ’ ಭಾಷಣ ಮಾಡುವಾಗ ಸುಮ್ಮನೇ ಕೇಳಿಬಿಡಿ ಅಥವಾ ಕಾರ್ಯಕ್ರಮ ಆಯೋಜಕರೊಂದಿಗೆ ಚರ್ಚಿಸಿ, ಮಾಧ್ಯಮಗಳನ್ನೂ ಕರೆಯಿರಿ; ಸಭೆಯಲ್ಲೇ, ಸ್ಟೇಜಿನಲ್ಲೇ ಊರಿನ ಸಮಸ್ಯೆಗಳಿಗಾಗಿ ಏನು ಮಾಡಿದ್ದೀರಿ ಅಂತ ಕೇಳಿಬಿಡಿ. ನಿಮ್ಮ ನ್ಯೂ ಇಯರ್ ರೆಸೊಲ್ಯುಶನ್ ಕೂಡಾ ಈಡೇರಿತು, ಜೀವನವೂ ಪಾವನವಾಯಿತು!

* ಒಂದಿಷ್ಟು ತ್ರಾಸ ಪಡುವ ನಿರ್ಣಯವಿದು: ಅಲ್ಪಸಂಖ್ಯಾತರು, ದಲಿತರು, ಹಿಂದುಳಿದವರಿಗೆ ಸರಕಾರವು ಇಷ್ಟೆಲ್ಲಾ ಸವಲತ್ತುಗಳನ್ನು ನೀಡುತ್ತಿದ್ದರೂ, ನಿಮ್ಮೂರಿನಲ್ಲಿರೋ ಈ ವರ್ಗಕ್ಕೆ ಸೇರಿದವರು ಉದ್ಧಾರವೇ ಆಗಿಲ್ಲ ಯಾಕೆ ಅಂತ ತಲೆ ರಪರಪ ಕೆರೆದುಕೊಂಡಿದ್ದುಂಟೋ? ಸ್ವಲ್ಪ ತನಿಖೆ ಮಾಡಿ, ಆರ್‌ಟಿಐ (ಮಾಹಿತಿ ಹಕ್ಕು) ಕಾಯಿದೆ ಇದೆ. ಪತ್ರಿಕೆಯವರಿಗೆ ಕೊಟ್ಟುಬಿಡಿ. ನಿಮ್ಮ ಈ ಹೊಸ ವರ್ಷದ ನಿರ್ಣಯಕ್ಕಾಗಿ ಆ ಇಡೀ ಊರೇ ನೆನಪಿಸಿಕೊಳ್ಳುತ್ತಿರುತ್ತದೆ! ನಿಮ್ಮ ತವರೂರಿಗೆ ಸಲ್ಲಿಸಿದ ಕೊಡುಗೆಯೂ ಇದಾಗುತ್ತದೆ.

ಯಾವ್ಯಾವುದೋ ಕೈಲಾಗದ ನಿರ್ಣಯಗಳನ್ನೆಲ್ಲಾ ಮಾಡಿಕೊಂಡು, ಅದು ಈ ಬಾರಿ ಸಾಧ್ಯವಾಗಲಿಲ್ಲ, ಮುಂದಿನ ಬಾರಿ ನೋಡೋಣ ಅಂತೆಲ್ಲಾ ಹತಾಶರಾಗುವ ಬದಲು, ಈ ರೀತಿಯದೊಂದು ನಿರ್ಣಯವನ್ನು (ನೀವು ಮತ್ತಷ್ಟನ್ನು ಪತ್ತೆ ಮಾಡಿಕೊಳ್ಳಬಹುದು – ಅವರವರ ಭಾವಕ್ಕೆ ಅವರವರ ಭಕುತಿಗೆ ತಕ್ಕಂತೆ!) ಮಾಡಿಕೊಂಡು ಬಿಟ್ಟರೆ, ಒಂದು ಮಿಕವನ್ನಲ್ಲ, ನೂರಾರು ಮಿಕಗಳನ್ನು ಹಿಡಿಯುತ್ತೇನೆ ಎಂದೂ ಶಪಥ ಮಾಡಿಕೊಳ್ಳುವ ಭರ್ಜರಿ ಅವಕಾಶವಿರುವ ಏಕೈಕ ಹೊಸವರ್ಷ ನಿರ್ಣಯದ ಕೆಟಗರಿ ಇದು. ಹೀಗಾಗಿ ಇದನ್ನೇ ನಿಮ್ಮ ಹೊಸ ವರ್ಷದ ಧ್ಯೇಯವಾಗಿಸಿಕೊಳ್ಳಿ! ಶುಭಮಸ್ತು!

LEAVE A REPLY

Please enter your comment!
Please enter your name here