ಕರ್ನಾಟಕ ಸಂಗೀತ ಸಾಮ್ರಾಜ್ಞಿ ಪಟ್ಟಮ್ಮಾಳ್ ಇನ್ನಿಲ್ಲ

2
694

ಕರ್ನಾಟಕ ಸಂಗೀತ ಸಾಮ್ರಾಜ್ಞಿ ಪಟ್ಟಮ್ಮಾಳ್ ಇನ್ನಿಲ್ಲ

ಕರ್ನಾಟಕ ಸಂಗೀತ ಲೋಕದ ಮಹಾನ್ ಕಲಾವಿದೆ, ಪದ್ಮವಿಭೂಷಣ ಡಿ.ಕೆ.ಪಟ್ಟಮ್ಮಾಳ್ (90) ಗುರುವಾರ ಚೆನ್ನೈಯ ಕೊಟ್ಟೂರುಪುರಂನ ತಮ್ಮ ನಿವಾಸದಲ್ಲಿ ನಿಧನರಾದರು.

1919ರ ಮಾರ್ಚ್ 28ರಂದು ಕಾಂಚಿಪುರದ ಸಂಪ್ರದಾಯವಾದಿ ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದ್ದ ಪಟ್ಟಮ್ಮಾಳ್, ಕರ್ನಾಟಕ ಸಂಗೀತ ಲೋಕಕ್ಕೆ ಅಧಿಕಾರಯುತವಾಗಿ ಕಾಲಿರಿಸಿದ ಮೊದಲ ಮಹಿಳೆ ಎಂದು ಕರ್ನಾಟಕ ಸಂಗೀತದ ಮೇರು ಕಲಾವಿದ, ದಿವಂಗತ ಸೆಮ್ಮಂಗುಡಿ ಶ್ರೀನಿವಾಸ ಅಯ್ಯರ್ ಅವರಿಂದ ಕರೆಸಿಕೊಂಡಿದ್ದರು.

ಕರ್ನಾಟಕ ಸಂಗೀತದ ತ್ರಿವಳಿ ಸ್ತ್ರೀರತ್ನಗಳಲ್ಲಿ ಎಂ.ಎಸ್.ಸುಬ್ಬುಲಕ್ಷ್ಮಿ, ಎಂ.ಎಲ್.ವಸಂತಕುಮಾರಿಯವರೊಂದಿಗೆ ಸೇರಿಕೊಂಡಿದ್ದ ಪಟ್ಟಮ್ಮಾಳ್ ಅವರ ಮೂಲ ಹೆಸರು ಅಲಮೇಲು. 65 ವರ್ಷಗಳ ಕಾಲ ಕರ್ನಾಟಕ ಸಂಗೀತದಲ್ಲಿ ತಮ್ಮ ಛಾಪು ಮೂಡಿಸಿದ ಪಟ್ಟಮ್ಮಾಳ್, 10 ಹರೆಯದಲ್ಲೇ ಮೊದಲ ಬಾರಿಗೆ ರೇಡಿಯೋದಲ್ಲಿ (ಅಂದಿನ ಮದ್ರಾಸ್ ಕಾರ್ಪೊರೇಶನ್ ರೇಡಿಯೋ, ಈಗ ಆಲ್ ಇಂಡಿಯಾ ರೇಡಿಯೋ) ಕಛೇರಿ ನೀಡಿದ್ದರು. ಮೂರು ವರ್ಷದ ಬಳಿಕ ಅಂದರೆ 1932ರಲ್ಲಿ ಅವರು ಮದ್ರಾಸ್ ರಸಿಕ ರಂಜನಿ ಸಭಾದಲ್ಲಿ ಮೊದಲ ಸಾರ್ವಜನಿಕ ಕಛೇರಿ ನೀಡಿದರು.

ಕರ್ನಾಟಕ ಸಂಗೀತದಲ್ಲಿ ಅತ್ಯಂತ ಕ್ಲಿಷ್ಟಕರವಾಗಿದ್ದ “ರಾಗಂ, ತಾನಂ, ಪಲ್ಲವಿ”ಯನ್ನು ಸಂಗೀತ ಕಛೇರಿಗಳಲ್ಲಿ ಬಳಸಿದ ಮೊದಲ ಮಹಿಳಾರತ್ನ ಎಂಬ ಹೆಗ್ಗಳಿಕೆಯೂ ಪಟ್ಟಮ್ಮಾಳ್ ಅವರಿಗಿದೆ. (ವೆಬ್‌ದುನಿಯಾ)

2 COMMENTS

  1. ಅದೆಲ್ಲ ಓಕೆ. “ಅಂ”ಕಾರ ಯಾಕೆ?
    ರಾಗ-ತಾನ-ಪಲ್ಲವಿ ಎಂದರೆ ಕನ್ನಡಿಸಿದಂತಾಗುತ್ತೆ 🙂

  2. ಆರ್ಬಿಟ್ ಪರ್ಸನ್,
    ಸ್ವಾಗತ. ತಡವಾಗಿ ಉತ್ತರಿಸ್ತಿರೋದಕ್ಕೆ ಮನ್ನಿಸಿ.
    ಸರಿ ನೀವು ಹೇಳಿದ್ದು, ಆದ್ರೆ, ರಾಗಂ, ತಾನಂ, ಪಲ್ಲವಿ ಅಂತ ಹಾಡು ಇದೆಯಲ್ಲ… ಅದನ್ನು ಒಂದಿಷ್ಟು ಬಳಸಿಕೊಂಡೆ ಅಷ್ಟೆ.

LEAVE A REPLY

Please enter your comment!
Please enter your name here