WhatsApp ಗ್ರೂಪ್‌ಗೆ ಆ್ಯಡ್ಮಿನ್ ಅಂಕುಶ; ಬರುತ್ತಿದೆ ಹಣ ಪಾವತಿ ಸೇವೆ

ದೈನಂದಿನ ಚಟುವಟಿಕೆಗಳ ಅವಿಭಾಜ್ಯ ಅಂಗವಾಗುತ್ತಿರುವ ವಾಟ್ಸ್ಆ್ಯಪ್ ಎಂಬ ಕಿರು ಮೆಸೇಜಿಂಗ್ ಸೇವೆಯಲ್ಲೀಗ ಎಲ್ಲಿ ಹೋದರೂ ಗ್ರೂಪುಗಳದ್ದೇ ಸದ್ದು. ಅವರವರ ಆಸಕ್ತಿಗೆ, ಕಚೇರಿಗೆ, ಊರಿಗೆ, ಕೆಲಸಕ್ಕೆ, ಕುಟುಂಬಕ್ಕೆ… ಸಂಬಂಧಪಟ್ಟ ಗ್ರೂಪುಗಳಲ್ಲಿ ಬರುವ ಸಂದೇಶಗಳ ಮಹಾಪೂರ. ಹೀಗಾಗಿಯೇ, ವಾಟ್ಸ್ಆ್ಯಪ್ ಚೆಕ್ ಮಾಡಲೂ ಪುರುಸೊತ್ತಿಲ್ಲ ಎಂಬ ಕೂಗು ಹೆಚ್ಚಾಗುತ್ತಿದೆ. ಇದರ ಜತೆಗೆ ವಾಟ್ಸ್ಆ್ಯಪ್ ಗ್ರೂಪುಗಳಲ್ಲಿ ಗುಡ್ ಮಾರ್ನಿಂಗ್, ಗುಡ್ ನೈಟ್ ಇತ್ಯಾದಿಗಳ ಮಹಾಪೂರವೂ ಇರುತ್ತದೆ. ಕ್ಷಣ ಕ್ಷಣಕ್ಕೆ ಠಣ್ ಎಂಬ ಸದ್ದಿನೊಂದಿಗೆ ಬರುವ ಈ ಸಂದೇಶಗಳು ಮನೋದ್ವೇಗಕ್ಕೂ ಕಾರಣವಾಗುತ್ತವೆ.

ಕೆಲವು ಗ್ರೂಪುಗಳಲ್ಲಿನ ಸದಸ್ಯರೆಲ್ಲರೂ ಶಿಸ್ತುಬದ್ಧವಾಗಿ, ವಾಟ್ಸ್ಆ್ಯಪ್ ಅನ್ನು ಯಾವುದಕ್ಕೆ ಬೇರೋ ಅದಕ್ಕೆ ಮಾತ್ರ ಬಳಸಿ ವಿವೇಚನೆ ತೋರಿಸುತ್ತಾರೆ. ಹೆಚ್ಚಿನ ಗ್ರೂಪುಗಳಲ್ಲಿ ಅನಗತ್ಯ ಹರಟೆಗೆ ಅವಕಾಶವಿರುವುದಿಲ್ಲ. ಗುಡ್ ಮಾರ್ನಿಂಗ್, ಗುಡ್ ನೈಟ್ ಸಂದೇಶಗಳನ್ನು ನಿಷೇಧಿಸಲಾಗಿರುತ್ತದೆ. ಇದಕ್ಕೆ ಕಾರಣವೆಂದರೆ, ಒಂದು ಗ್ರೂಪಿನಲ್ಲಿರುವ ಎಲ್ಲ ಇನ್ನೂರೈವತ್ತಕ್ಕೂ ಹೆಚ್ಚು ಸದಸ್ಯರು ಗುಡ್ ಮಾರ್ನಿಂಗ್ ಅಂತ ಸಂದೇಶ ಕಳುಹಿಸಿದರೆ ಆ ಗ್ರೂಪಿನ ಸದಸ್ಯರ ಪರಿಸ್ಥಿತಿ ಹೇಗಿರಬೇಡ! ಹೀಗಾಗಿಯೇ ಗ್ರೂಪ್ ಆ್ಯಡ್ಮಿನ್‌ಗಳು ತಮ್ಮ ಬಳಗಕ್ಕೊಂದು ನಿಯಮಗಳ ರೂಪುರೇಷೆ ಹಾಕಿಟ್ಟಿರುತ್ತಾರೆ. ಉದಾಹರಣೆಗೆ, ಯಕ್ಷಗಾನ ಎಂಬ ಬಳಗವಿದ್ದರೆ, ಅದರಲ್ಲಿ ಯಕ್ಷಗಾನಕ್ಕೆ ಸಂಬಂಧಿಸಿದ ವಿಚಾರಗಳು ಮಾತ್ರ, ಯಾವುದೇ ರಾಜಕೀಯ ವಿಷಯಗಳಿಗೆ ಅವಕಾಶವಿಲ್ಲ ಮತ್ತು ಫಾರ್ವರ್ಡ್ ಸಂದೇಶಗಳಿಗೂ ಕೂಡ ನಿಷೇಧ ಹೇರಲಾಗಿರುತ್ತದೆ.

ಈ ರೀತಿಯಾಗಿ ನಿಯಮಗಳನ್ನು ಅಳವಡಿಸಿದರೂ ಕೂಡ, ಕೆಲವರು ಗೊತ್ತಿದ್ದೋ ಗೊತ್ತಿಲ್ಲದೆಯೋ ಸಂದೇಶಗಳನ್ನು ಫಾರ್ವರ್ಡ್ ಮಾಡುತ್ತಲೇ ಇರುತ್ತಾರೆ, ಗುಡ್ಮಾರ್ನಿಂಗ್ – ಗುಡ್‌ನೈಟ್‌ಗಳು ಕೇಳಿಬರುತ್ತಲೇ ಇರುತ್ತವೆ. ಅಪ್ಪಿ ತಪ್ಪಿ ಹಾಕಿದರೂ ಅದನ್ನು ಪೋಸ್ಟ್ ಮಾಡಿದವರು ಡಿಲೀಟ್ ಮಾಡುವ ಆಯ್ಕೆ ಇದ್ದರೂ, ಅದು ಹೆಚ್ಚಿನವರಿಗೆ ಗೊತ್ತಿರುವುದಿಲ್ಲ. ಈಗಿನ ವೈಶಿಷ್ಟ್ಯದ ಪ್ರಕಾರ, ವಾಟ್ಸ್ಆ್ಯಪ್ ಸಂದೇಶಗಳನ್ನು ಪೋಸ್ಟ್ ಮಾಡಿದವರು 68 ನಿಮಿಷಗಳ ಒಳಗೆ ಡಿಲೀಟ್ ಮಾಡಬಹುದಾಗಿದೆ ಎಂಬುದನ್ನು ನೆನಪಿಡಿ.

ಇದೀಗ, ಗ್ರೂಪ್ ಆ್ಯಡ್ಮಿನ್‌ಗಳಿಗೆ ವಾಟ್ಸ್ಆ್ಯಪ್ ಹೊಸ ಅಸ್ತ್ರವೊಂದನ್ನು ನೀಡಾರಂಭಿಸಿದೆ. ಗ್ರೂಪಿನ ಸದಸ್ಯರಿಗೆ ಪೋಸ್ಟ್ ಮಾಡಲು ಅವಕಾಶವೇ ಇಲ್ಲದಂತೆ ನಿರ್ಬಂಧಿಸುವ ಅಧಿಕಾರವದು. ವಾಟ್ಸ್ಆ್ಯಪ್‌ನ ತೀರಾ ಇತ್ತೀಚಿನ ವೈಶಿಷ್ಟ್ಯ ಇದು. ಈಗಷ್ಟೇ ವಿಭಿನ್ನ ಫೋನ್‌ಗಳಿಗೆ ಬಿಡುಗಡೆಯಾಗುತ್ತಿದೆ. ಅಂದರೆ, ನಿಮ್ಮ ಫೋನ್‌ಗೆ ಅಪ್‌ಡೇಟ್ ಬರುವವರೆಗೂ ಕಾಯಬೇಕಾಗುತ್ತದೆ. ಇದರ ಹೆಸರು ‘ಸೆಂಡ್ ಮೆಸೇಜಸ್’ ವೈಶಿಷ್ಟ್ಯ. ಈಗಾಗಲೇ ಐಒಎಸ್ (ಆ್ಯಪಲ್) ಹಾಗೂ ಆ್ಯಂಡ್ರಾಯ್ಡ್ ಸಾಧನಗಳಿಗೆ ಹೊಸ ಆವೃತ್ತಿ ಬರಲಾರಂಭಿಸಿದೆ. ಈ ವೈಶಿಷ್ಟ್ಯದ ಪ್ರಕಾರ, ಆ್ಯಡ್ಮಿನ್‌ಗಳು ಸದಸ್ಯರ ಚಾಟ್ ಆಯ್ಕೆಯನ್ನೇ ನಿರ್ಬಂಧಿಸಬಹುದು ಮತ್ತು ಇದನ್ನು ನಿಯಂತ್ರಿಸುವ ಅಧಿಕಾರ ಗ್ರೂಪ್ ಆ್ಯಡ್ಮಿನ್‌ಗಳಿಗೆ ಮಾತ್ರವೇ ಇರುತ್ತದೆ. ಇದರರ್ಥ, ಯಾರೆಲ್ಲ ಆ್ಯಡ್ಮಿನ್ ಆಗಿರುತ್ತಾರೋ (ಒಂದು ಗ್ರೂಪಿಗೆ ಒಂದಕ್ಕಿಂತ ಹೆಚ್ಚು ಮಂದಿ ಆ್ಯಡ್ಮಿನ್‌ಗಳು ಇರಬಹುದು) ಅವರು ಮಾತ್ರವೇ ಸಂದೇಶ, ಫೋಟೋ, ವೀಡಿಯೋಗಳನ್ನು ಪೋಸ್ಟ್ ಮಾಡುವ ಅಧಿಕಾರ ಹೊಂದಿರುತ್ತಾರೆ.

ಈ ವೈಶಿಷ್ಟ್ಯವನ್ನೂ ಸಮರ್ಪಕವಾಗಿ ಬಳಸಿಕೊಳ್ಳಬಹುದು. ಆ್ಯಡ್ಮಿನ್‌ಗಳು ಮಲಗುವ ವೇಳೆ ಅಥವಾ ನೆಟ್‌ವರ್ಕ್ ಇಲ್ಲದ ಸ್ಥಳಗಳಿಗೆ ಹೋಗುವಾಗ, ಈ ವೈಶಿಷ್ಟ್ಯವನ್ನು ಆನ್ ಮಾಡಿಟ್ಟರೆ, ಇತರರು ಕಳುಹಿಸುವ ಅನಗತ್ಯ ಸಂದೇಶಗಳನ್ನು ತಡೆಯಬಹುದು. ಉಳಿದ ಸಮಯದಲ್ಲಿ ಹೇಗೂ ಆ್ಯಡ್ಮಿನ್‌ಗಳು ಸಂದೇಶಗಳನ್ನು ಗಮನಿಸುತ್ತಿರುತ್ತಾರಲ್ಲ!

ವಾಟ್ಸ್ಆ್ಯಪ್‌ನ ಗ್ರೂಪ್ ಸೆಟ್ಟಿಂಗ್ಸ್‌ನಲ್ಲಿ ‘ಒನ್ಲಿ ಆ್ಯಡ್ಮಿನ್ಸ್’ ಎಂಬ ಆಯ್ಕೆ ಗೋಚರಿಸುತ್ತದೆ. ಎಲ್ಲ ಸದಸ್ಯರಿಗೆ ಪೋಸ್ಟ್ ಮಾಡಲು ಅಧಿಕಾರ ನೀಡಿದರೆ, ‘ನೀವು ಸೆಟ್ಟಿಂಗ್ಸ್ ಬದಲಾಯಿಸಿದ್ದೀರಿ’ ಎಂಬರ್ಥದ ಸೂಚನೆಯೊಂದು ಕಾಣಿಸಿಕೊಳ್ಳುತ್ತದೆ. ಹೀಗಾಗಿ, ಆ್ಯಡ್ಮಿನ್‌ಗಳು ಬಲವಂತವಾಗಿ ನಿರ್ಬಂಧಿಸುವ ಮುನ್ನ, ನಾವಾಗಿಯೇ ಯೋಚಿಸಿ, ಒಳ್ಳೆಯದನ್ನಷ್ಟೇ, ದೃಢೀಕರಿಸಿದ ಮಾಹಿತಿಯನ್ನಷ್ಟೇ ಪ್ರಸಾರ ಮಾಡೋಣ ಹಾಗೂ ಗ್ರೂಪಿನ ನಿಯಮಗಳಿಗೆ ಬದ್ಧರಾಗಿರೋಣ, ಅಲ್ಲವೇ?

ವಾಟ್ಸ್ಆ್ಯಪ್‌ನಿಂದ ಹಣ ಕಳುಹಿಸುವುದು
ವಾಟ್ಸ್ಆ್ಯಪ್ ಮೂಲಕ ಹಣ ಕಳುಹಿಸುವ ಸೌಕರ್ಯವೂ ಶೀಘ್ರದಲ್ಲೇ ಆರಂಭವಾಗುತ್ತಿದ್ದು, ಇದಕ್ಕೆ ಮುನ್ನ ಈಗ ತನ್ನ ಸೇವಾ ನಿಯಮಗಳು ಹಾಗೂ ಗೋಪ್ಯತಾ ನೀತಿಯನ್ನು ವಾಟ್ಸ್ಆ್ಯಪ್ ಪರಿಷ್ಕರಿಸುತ್ತಿದೆ. ವಾಟ್ಸ್ಆ್ಯಪ್ ಹಣ ಪಾವತಿ ವ್ಯವಸ್ಥೆಯು ಪ್ರಾಯೋಗಿಕ ಹಂತದಲ್ಲಿದ್ದು, ಕೆಲವೇ ವಾರಗಳಲ್ಲಿ ಲಭ್ಯವಾಗಲಿದೆ. ಇದು ಈಗಾಗಲೇ ಸಂದೇಶದ ಮೂಲಕವೇ ಹಣ ಕಳುಹಿಸುವ ವ್ಯವಸ್ಥೆ ಆರಂಭಿಸಿರುವ ಪೇಟಿಎಂಗೆ ಸ್ಫರ್ಧೆಯೂ ಹೌದು.

ಇದಕ್ಕೆ ವಾಟ್ಸ್ಆ್ಯಪ್ ಹಾಗೂ ಯೂನಿಫೈಡ್ ಪೇಮೆಂಟ್ ಇಂಟರ್ಫೇಸ್ (ಯುಪಿಐ) ನಡುವೆ ತಾದಾತ್ಮ್ಯ ಇರಬೇಕಾಗುತ್ತದೆ. ಈ ನೀತಿಯ ಪರಿಷ್ಕರಣೆಯ ಪ್ರಕಾರ, “ನೀವು ಹಣ ಕಳುಹಿಸುವಾಗ, ಸ್ವೀಕರಿಸುವಾಗ ಅಥವಾ ವಿನಂತಿಸುವಾಗ, ಸಮಯ, ದಿನಾಂಕ ಹಾಗೂ ರೆಫರೆನ್ಸ್ ಟ್ರಾನ್ಸಾಕ್ಷನ್ ನಂಬರ್ ಕೂಡ ನಾವು ಸಂಗ್ರಹಿಸುತ್ತೇವೆ” ಎನ್ನುತ್ತದೆ ವಾಟ್ಸ್ಆ್ಯಪ್.

ಪೇಟಿಎಂ ಸಂಸ್ಥಾಪಕ ವಿಜಯ್ ಶೇಖರ್ ಶರ್ಮಾ ಅವರು ಈ ತಿಂಗಳಾರಂಭದಲ್ಲಿ ವಾಟ್ಸ್ಆ್ಯಪ್ ಯುಪಿಐ ಸಿಸ್ಟಂ ಬಗ್ಗೆ ಸಂದೇಹ ವ್ಯಕ್ತಪಡಿಸಿ, ‘ಅದರಲ್ಲಿ ಗ್ರಾಹಕರಿಗೆ ಸುರಕ್ಷತಾ ಅಪಾಯಗಳಿವೆ, ಅದು ನಿಯಮಗಳಿಗೆ ಬದ್ಧವಾಗಿಲ್ಲ’ ಎಂದು ಆರೋಪಿಸಿದ್ದರು. ಈ ಹಿನ್ನೆಲೆಯಲ್ಲಿ, ಪಾವತಿಗೆ ಸಂಬಂಧಸಿದ ಎಲ್ಲ ದತ್ತಾಂಶಗಳನ್ನು ಭಾರತದಲ್ಲಿರುವ ಸರ್ವರ್‌ಗಳಲ್ಲೇ ಸಂಗ್ರಹಿಸಬೇಕು ಎಂದು ಭಾರತೀಯ ರಿಸರ್ವ್ ಬ್ಯಾಂಕ್ ಕಟ್ಟುನಿಟ್ಟಿನ ಆಜ್ಞೆಯನ್ನೂ ನೀಡಿದೆ. ಇದೇ ವೇಳೆ, ತನ್ನ ಮಾತೃಸಂಸ್ಥೆ ಫೇಸ್‌ಬುಕ್‌ನ ಮೂಲಸೌಕರ್ಯಗಳನ್ನು ತಾನು ಬಳಸುತ್ತಿದ್ದರೂ, ಈ ಹಣ ಪಾವತಿ ಕುರಿತ ಮಾಹಿತಿಯನ್ನು ಫೇಸ್‌ಬುಕ್ ವಾಣಿಜ್ಯ ಉದ್ದೇಶಕ್ಕೆ ಎಂದಿಗೂ ಬಳಸಿಕೊಳ್ಳುವುದಿಲ್ಲ ಎಂಬ ಭರವಸೆಯನ್ನೂ ನೀಡಿದೆ.

ಇತ್ತೀಚೆಗೆ ಫೇಸ್‌ಬುಕ್‌ನಲ್ಲಿ ಕೋಟ್ಯಂತರ ಮಂದಿಯ ಖಾಸಗಿ ಮಾಹಿತಿಯ ಉಲ್ಲಂಘನೆಯಾದ ಬಳಿಕ ಆನ್‌ಲೈನ್ ಸುರಕ್ಷತೆ ಬಗ್ಗೆ ಜನರಲ್ಲಿ ಹೆಚ್ಚು ಆತಂಕ ವ್ಯಕ್ತವಾಗಿದೆ. ಈಗ ಹಣಕಾಸು ವಹಿವಾಟಿನ ಬಗ್ಗೆ ರಿಸರ್ವ್ ಬ್ಯಾಂಕ್ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುತ್ತಿರುವ ಹಿನ್ನೆಲೆಯಲ್ಲಿ, ಡೆಬಿಟ್ ಕಾರ್ಡ್ ಮತ್ತು ಯುಪಿಐ ಪಿನ್ ಸಂಖ್ಯೆಗಳೇ ಮುಂತಾದ ಸೆನ್ಸಿಟಿವ್ ಮಾಹಿತಿಯನ್ನು ಯಾವುದೇ ಸರ್ವರ್‌ನಲ್ಲಿಯೂ ಉಳಿಸಿಕೊಳ್ಳುವುದಿಲ್ಲ ಎಂದು ಎಲ್ಲ ಹಣಕಾಸು ಸೇವಾ ಆ್ಯಪ್‌ಗಳೂ ಭರವಸೆ ನೀಡುತ್ತಿವೆ.

ಮಾಹಿತಿ@ತಂತ್ರಜ್ಞಾನ ವಿಜಯ ಕರ್ನಾಟಕ ಅಂಕಣ for 02 ಜುಲೈ 2018 by ಅವಿನಾಶ್ ಬಿ.

Avinash B

Avinash B. Tech Writer, Columnist, Working as Online media Journalist for more than two decades. Passionate about Technology and Gadgets. Yakshagana and Music are passion.

Recent Posts

ರಿಯಲ್‌ಮಿ ನಾರ್ಜೋ 70 ಟರ್ಬೊ 5 ಜಿ, ರಿಯಲ್‌ಮಿ ಬಡ್ಸ್ ಎನ್‌1 ಬಿಡುಗಡೆ: ಬೆಲೆ, ವೈಶಿಷ್ಟ್ಯ ತಿಳಿಯಿರಿ

ಪ್ರಿಯ ಸ್ಮಾರ್ಟ್‌ಫೋನ್ ಬ್ರಾಂಡ್ ಆಗಿರುವ ರಿಯಲ್‌ಮಿ, ನಾರ್ಜೋ 70 ಟರ್ಬೊ 5 ಜಿ ಮತ್ತು ರಿಯಲ್‌ಮಿ ಬಡ್ಸ್ ಎನ್ 1…

1 month ago

ಓದುವಿಕೆ, ಕಲಿಕೆ ಉತ್ತೇಜನಕ್ಕೆ ‘ರೀಡ್-ಅ-ಥಾನ್’: ದಾಖಲೆಯ ಗುರಿ

ಮಕ್ಕಳ ಓದುವಿಕೆ ಮತ್ತು ಪ್ರಾರಂಭಿಕ ಕಲಿಕೆಗೆ ಉತ್ತೇಜನಕ್ಕಾಗಿ ರೀಡ್-ಅ-ಥಾನ್.

1 month ago

Realme 13 +, Realme 13 5ಜಿ ಫೋನ್ ಬಿಡುಗಡೆ: ವೇಗದ ಫೋನ್‌ನ ವೈಶಿಷ್ಟ್ಯಗಳು, ಬೆಲೆ ಇಲ್ಲಿ ತಿಳಿಯಿರಿ

ಭಾರತೀಯ ಯುವಜನರಲ್ಲಿ ಅತ್ಯಂತ ಜನಪ್ರಿಯ ಸ್ಮಾರ್ಟ್ ಫೋನ್ ಬ್ರಾಂಡ್ ಆಗಿರುವ ರಿಯಲ್ ಮಿ ಬಹುನಿರೀಕ್ಷಿತ ರಿಯಲ್ ಮಿ 13 ಸೀರಿಸ್…

2 months ago

e-ಯುಗದ ತನಿಖಾ ಪತ್ರಿಕೋದ್ಯಮ: ಫ್ಯಾಕ್ಟ್ ಚೆಕ್

Fact Check ಎಂಬುದು ಈಗಿನ ತನಿಖಾ ಪತ್ರಿಕೋದ್ಯಮ. ಏನು, ಹೇಗೆ ಎತ್ತ ಎಂಬ ಮಾಹಿತಿ ಇಲ್ಲಿದೆ.

3 months ago

ಯಕ್ಷ ಮಂತ್ರ ಮಾಂಗಲ್ಯ: ಕೀರ್ತನಾ ಪ್ರಸಾದ ಕಲ್ಯಾಣವು

ಹಾಡುಗಾರಿಕೆ, ಚೆಂಡೆ-ಮದ್ದಳೆಯ ಬಿಡಿತ-ಮುಕ್ತಾಯಗಳ ಬಳಿಕ, ಬಂದಿದ್ದ ಗಣ್ಯರು, ಒಂದೊಂದು ಹಾಡಿನಲ್ಲಿ ಅಡಕವಾಗಿರುವ ಮಂತ್ರ ಮಾಂಗಲ್ಯದ ಪ್ರತಿಜ್ಞಾಗುಚ್ಛವನ್ನು ವಿವರಿಸಿ, ವಧು-ವರರಿಗೆ ಬೋಧಿಸಿದರು

8 months ago

ಮುದ್ದಣನ ಕುಮಾರ ವಿಜಯ, ರತ್ನಾವತಿ ಕಲ್ಯಾಣ ಯಕ್ಷಗಾನ ಧ್ವನಿಮುದ್ರಿಕೆ

ಮುದ್ದಣನ ಕುಮಾರ ವಿಜಯದ ಸುಮಾರು 700ರಷ್ಟಿರುವ ಹಾಡುಗಳನ್ನು ಹಾಡಿದ್ದು ತೆಂಕು ತಿಟ್ಟಿನ ಬಲಿಪ ಶೈಲಿಯ ಪ್ರತಿಪಾದಕ ಭಾಗವತರೇ. ಏಳೆಂಟು ವರ್ಷಗಳ…

8 months ago