Categories: Info@Technology

ರಾಹುಲ್ ವೆಲ್ಲಾಲ್: ಆಡುವ ವಯಸ್ಸಲ್ಲಿ ಪಾಡುವ ಹುಡುಗ

ಈ ಹುಡುಗ ಸಂಗೀತ ಕಛೇರಿಯಲ್ಲಿ ಹಾಡಲು ವೇದಿಕೆಯೇರಿದನೆಂದರೆ ಪ್ರೇಕ್ಷಕರು “ರಾಹುಲ್, ರಾಹುಲ್, ರಾಹುಲ್” ಅಂತ ಜನ ಆನಂದ ಪರವಶರಾಗಿ ಲಯಬದ್ಧವಾಗಿ ಕೈಚಪ್ಪಾಳೆ ತಟ್ಟುತ್ತಾರೆ. 11ರ ಹರೆಯದ ಈ ಬಾಲಕನೋ… ಧನ್ಯತಾ ಭಾವದ ಮುಗುಳ್ನಗೆಯೊಂದಿಗೆ ಸ್ವರಗಳ ಏರಿಳಿತ, ಭಾವ ತನ್ಮಯತೆಯೊಂದಿಗೆ ಹಾಡುವುದರಲ್ಲಿ ತಲ್ಲೀನನಾದಾಗ, ಪ್ರೇಕ್ಷಕರು ಮೌನವಾಗಿ ಆನಂದಿಸತೊಡಗುತ್ತಾರೆ.

ಈ ಪುಟ್ಟ ಹುಡುಗನ ಹೆಸರು ರಾಹುಲ್ ವೆಲ್ಲಾಲ್. ವಯಸ್ಸು 11 ವರ್ಷ. ಆರನೇ ತರಗತಿಗೆ ಓರಗೆಯ ಹುಡುಗರು ಆಟ, ಮೊಬೈಲ್ ಮುಂತಾದವುಗಳಲ್ಲಿ ಸಮಯ ಕಳೆಯುತ್ತಿದ್ದರೆ, ಈ ಹುಡುಗ ದಿನಕ್ಕೆರಡು ಗಂಟೆ ಸಂಗೀತಾಭ್ಯಾಸದೊಂದಿಗೆ ಸಾಧನೆಯ ಮತ್ತು ಖ್ಯಾತಿಯ ಮೆಟ್ಟಿಲನ್ನು ಏರಲಾರಂಭಿಸಿದ್ದಾನೆ. ಆಬಾಲವೃದ್ಧರನ್ನೂ ತಲೆದೂಗುವಂತೆ ಮಾಡುವ, ಅವರ ಮನಸ್ಸು ಪ್ರಫುಲ್ಲಿತಗೊಳಿಸುವ ಈ ಪ್ರತಿಭಾ ಸಂಪನ್ನ, ಸಿಂಗಾಪುರ, ನೈಜೀರಿಯಾ, ಅಬುಧಾಬಿ ಮುಂತಾದ ಹೊರ ನಾಡಲ್ಲೂ ಗಾಯನ ಸುಧೆ ಹರಿಸಿದ್ದಾನೆ. ಮೂಡುಬಿದಿರೆ ಆಳ್ವಾಸ್ ವಿರಾಸತ್‌ನಲ್ಲಿ 60 ಸಾವಿರಕ್ಕೂ ಹೆಚ್ಚು ಮಂದಿಯ ಮನತಣಿಸಿದ ಪ್ರತಿಭೆ. ಉಡುಪಿ ಪರ್ಯಾಯೋತ್ಸವದಲ್ಲಿ ‘ಬಾರೋ ಕೃಷ್ಣಯ್ಯ’ ಹಾಡಿದಾಗ ವೃದ್ಧರೊಬ್ಬರು ವೇದಿಕೆಯೆದುರೇ ಸಾಷ್ಟಾಂಗ ನಮಸ್ಕರಿಸಿದ್ದನ್ನು ಈತನ ತಂದೆ ನೆನಪಿಸಿಕೊಳ್ಳುತ್ತಾರೆ.

ಅತಿ ಚಿಕ್ಕ ವಯಸ್ಸಿಗೇ ಇಂಥ ಸಾಧನೆ ಮಾಡಿದ್ದಾನೆಂಬುದನ್ನು ನಂಬಲಸಾಧ್ಯವಾದರೂ, ಯೂಟ್ಯೂಬ್‌ನಲ್ಲಿ, ಫೇಸ್‌ಬುಕ್‌ನಲ್ಲಿ ಈ ಹುಡುಗನ ಹಾಡುಗಳು ವೈರಲ್ ಆಗುತ್ತಿರುವುದನ್ನು ನೋಡಿದರೆ ನಂಬಲೇಬೇಕು. ಒಮ್ಮೆ ಕೇಳಿದರೆ, ಖಂಡಿತಾ ಈತನ ಪುಟ್ಟ ಕಂಠದಿಂದ ಬರುವ ಇತರ ಸುಶ್ರಾವ್ಯ ಹಾಡುಗಳನ್ನೂ ಕೇಳಲು ಕಾತರಿಸುವುದು ಖಂಡಿತ. ಅದರಲ್ಲಿರುವ ಕಾಮೆಂಟ್‌ಗಳನ್ನು ನೋಡಿದರೂ ತಿಳಿಯುತ್ತದೆ ಈ ಬಾಲಕನ ಸಂಗೀತ ಪ್ರತಿಭೆಯ ಪ್ರಭೆ. ವಿದೇಶದಲ್ಲಿರುವ ಒಬ್ಬರಂತೂ, ಇವನ ಯೂಟ್ಯೂಬ್ ಹಾಡುಗಳನ್ನು ಕೇಳಿ, ಪಾರ್ಕಿನ್ಸನ್ ಕಾಯಿಲೆಯಿಂದ ಬಳಲುತ್ತಿದ್ದ ತಮ್ಮ ತಂದೆ ಖುಷಿಯಿಂದ ಮುಖ ಅರಳಿಸಿದ್ದನ್ನೂ ತುಂಬ ಸಂತೋಷದಿಂದ ಹೇಳಿಕೊಂಡಿದ್ದಾರೆ. ರಾಹುಲ್ ಹಾಡು ಕೇಳದಿದ್ದರೆ ಮಗು ಊಟ ಮಾಡುವುದಿಲ್ಲ, ಮಗು ಅತ್ತಾಗ ಸಂತೈಸಲು ಈ ಹಾಡು ಹಾಕುತ್ತೇನೆ ಅಂತೆಲ್ಲಾ ಬರೆದವರು ಕೂಡ ತುಂಬ ಮಂದಿ.

ಇಂಥ ಅದ್ಭುತ ಪ್ರತಿಭೆಯೊಂದು ಬೆಂಗಳೂರಿನ ಹೃದಯಭಾಗದಲ್ಲಿ ಬೆಳಗುತ್ತಿದೆ. ಮನೆಗೆ ಹೋದರೆ ಅಲ್ಲಿ ಹುಡುಗನಿಗೆ ಅಲ್ಲಲ್ಲಿ ದೊರೆತ ಮೆಡಲುಗಳು, ಪ್ರಶಸ್ತಿಪತ್ರಗಳೇ ಮನ ಸೆಳೆಯುತ್ತವೆ. ಜು.3ರಂದು ಕರ್ನಾಟಕ ಶಾಸ್ತ್ರೀಯ ಸಂಗೀತಲೋಕದ ವಿದುಷಿಯರಲ್ಲಿ ಕೇಳಿಬರುವ ಅಗ್ರ ಹೆಸರು ಪದ್ಮಭೂಷಣ ದಿ.ಎಂ.ಎಲ್.ವಸಂತ ಕುಮಾರಿ ಅವರ 90ನೇ ಜನ್ಮೋತ್ಸವದಂದು, ಸಂಗೀತ ಸ್ವರ್ಗವಾಗಿರುವ ಚೆನ್ನೈಯಲ್ಲಿ, ಅದು ಕೂಡ ಮದ್ರಾಸ್ ಮ್ಯೂಸಿಕ್ ಅಕಾಡೆಮಿಯಲ್ಲಿ ಎರಡನೇ ಬಾರಿ ಹಾಡುವ ಭಾಗ್ಯ ರಾಹುಲ್‌ಗೆ ಒಲಿದಿದೆ. ಆಹ್ವಾನಿಸಿದವರು ಬೇರಾರೂ ಅಲ್ಲ, ಸಂಗೀತಲೋಕದ ಅಗ್ರಗಣ್ಯ ಹೆಸರು ಸುಧಾ ರಘುನಾಥನ್. ಹಳೆ ಬೇರಿನ ಕಾರ್ಯಕ್ರಮಕ್ಕೆ ಹೊಸ ಚಿಗುರಿನ ಸಂಗೀತ ಸಿಂಚನ. ಇದೇ ಕಾರ್ಯಕ್ರಮದಲ್ಲಿ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಕೂಡ ರಾಹುಲ್ ಗಾಯನ ಸುಧೆಗೆ ಕಿವಿಯಾಗಲಿದ್ದಾರೆ. ಸ್ವರ ಲೋಕದ ಪದ್ಮ ಪ್ರಶಸ್ತಿ ಪುರಸ್ಕೃತರನೇಕರ ಪ್ರೇಕ್ಷಕರಾಗಿರುವ ಈ ಕೂಟದಲ್ಲಿ, ಹುಡುಗ ಧ್ವನಿಯಾಗಲಿದ್ದಾನೆ.

ಒಲಿದದ್ದು ಹೇಗೆ?
ಹಾಗಂತ ಈತನ ತಂದೆ ತಾಯಿಯೇನೂ ಸಂಗೀತದ ಹಿನ್ನೆಲೆಯುಳ್ಳವರಲ್ಲ. ಹೇಗೆ ಬಂತು ಅಂತ ಕೇಳಿದರೆ, ಅಪ್ಪ ರವಿಶಂಕರ್ ವೆಲ್ಲಾಲ್, ಅಮ್ಮ ಹೇಮಾ ವೆಲ್ಲಾಲ್ ಹೇಳುವುದು ಹೀಗೆ. “ಎರಡೂವರೆ ವರ್ಷದವನಿರುವಾಗಲೇ ಕೇಳಿದ ಹಾಡನ್ನು ಗುನುಗುನಿಸುವುದೋ, ತಾಳ ಹಾಕುವ ರೀತಿಯಲ್ಲಿ ಕೈಯಾಡಿಸುತ್ತಿರುವಾಗ ಸಂಗೀತದ ಆಸಕ್ತಿ ಕಂಡುಬಂತು. ಶಾಸ್ತ್ರೀಯ ಸಂಗೀತವೇ ಸೂಕ್ತ ಅಂದುಕೊಂಡು ಹಲವು ಮಂದಿಯನ್ನು ಕೇಳಿದೆವು. ಅಷ್ಟು ಸಣ್ಣ ಬಾಲಕನಿಗೆ ಪಾಠ ಹೇಳಿಕೊಡಲು ಯಾರೂ ಮುಂದೆ ಬರಲಿಲ್ಲ. ನಂತರ ನಾವೇ ಶ್ಲೋಕ ತರಗತಿಗೆ ಹಾಕಿ, ಕೊನೆಗೆ 4 ವರ್ಷದವನಿರುವಾಗ ಸುಚೇತನ್ ರಂಗಸ್ವಾಮಿ ಅವರಲ್ಲಿ ಶಾಸ್ತ್ರೀಯ ಸಂಗೀತ ತರಗತಿಗೆ ಸೇರಿಸಿದೆವು. ಮೂರುವರೆ ವರ್ಷ ಅಭ್ಯಾಸ ಮಾಡಿದ ಬಳಿಕ, ಈಗ ವಿದುಷಿ ಕಲಾವತಿ ಅವಧೂತ್ ಅವರಲ್ಲಿ ಅಭ್ಯಾಸ ಮುಂದುವರಿಸುತ್ತಿದ್ದಾನೆ.”

ಸಣ್ಣ ವಯಸ್ಸಿಗೇ ದೇಶ-ವಿದೇಶಗಳಲ್ಲಿ ಪ್ರಸಿದ್ಧನಾಗಿಬಿಟ್ಟಿರುವ ಈ ಪುಟಾಣಿಗೆ ಸಾಕಷ್ಟು ಗೌರವಗಳು ಅರಸಿ ಬಂದಿವೆ. ಚೆನ್ನೈಯ ಮದ್ರಾಸ್ ಮ್ಯೂಸಿಕ್ ಅಕಾಡೆಮಿ, ನಾರದ ಗಾನ ಸಭಾ, ಬೆಂಗಳೂರಿನ ಶ್ರೀರಾಮ ಸೇವಾ ಮಂಡಳಿ, ಗಾಯನ ಸಮಾಜ ಸಹಿತ ದೊಡ್ಡ ದೊಡ್ಡ ಗಾನ ಸಭಾಗಳಲ್ಲಿ ಕಛೇರಿ ನಡೆಸಿದ ಹೆಮ್ಮೆಯಿದೆ. ಗಾಯಕ ಎಸ್.ಪಿ.ಬಾಲಸುಬ್ರಹ್ಮಣ್ಯಂ, ಶ್ರೀಶ್ರೀ ರವಿಶಂಕರ್ ಮುಂತಾದವರ ಭೇಟಿ ಮತ್ತು ಆಶೀರ್ವಾದದ ಸುಯೋಗವನ್ನು ನೆನಪಿಸಿಕೊಳ್ಳುವ ಈ ಬಾಲಕನಿಗೆ, ಸಂಗೀತ ಲೋಕದಲ್ಲಿ ತಾನಿನ್ನೂ ಎಳೆಯ, ಸಾಧಿಸಬೇಕಾದುದು ಬಹಳಷ್ಟಿದೆ ಎಂಬ ವಿನಮ್ರತೆ. ಸಂಗೀತ ಲೋಕದ ದಂತಕತೆ ಡಾ.ಎಂ. ಬಾಲಮುರಳಿಕೃಷ್ಣ ಅವರ ಹಾಡುಗಳೆಂದರೆ ಇವನಿಗಿಷ್ಟ. ಅವರೇ ಸಂಯೋಜಿಸಿದ ಪಿಬರೇ ರಾಮರಸಂ ಅವನಿಗಿಷ್ಟವಾದ ಹಾಡು.

ಮೃದಂಗವನ್ನು ಕೂಳೂರು ಜಯಚಂದ್ರ ರಾವ್ ಅವರಿಂದಲೂ, ಪಾಶ್ಚಾತ್ಯ ಪಿಯಾನೋ ವಾದನವನ್ನು ಅಭಿಷೇಕ್ ಎಸ್.ಎನ್. ಅವರಿಂದಲೂ ಅಭ್ಯಸಿಸುತ್ತಿರುವ ರಾಹುಲ್, ಬೆಂಗಳೂರು ಕಾರ್ಮೆಲ್ ಪಬ್ಲಿಕ್ ಸ್ಕೂಲ್‌ನಲ್ಲಿ 6ನೇ ತರಗತಿ ಓದುತ್ತಿದ್ದಾನೆ. ದಿನಕ್ಕೆರಡು ಗಂಟೆ ಸಂಗೀತಾಭ್ಯಾಸವೇ ಇವನ ಪ್ರತಿಭೆ ಉಜ್ವಲವಾಗಿ ಬೆಳಗಲು ಸಹಕಾರಿ. ಯೂಟ್ಯೂಬ್‌ನಲ್ಲಿ ಇವನದ್ದೇ ಆದ ಪುಟವೊಂದಿದೆ. ಅದರ ವೀಕ್ಷಕರ ಸಂಖ್ಯೆ 10 ಲಕ್ಷ ತಲುಪುತ್ತಿದೆ. ಇಷ್ಟು ಪುಟ್ಟ ಬಾಲಕನ ಯೂಟ್ಯೂಬ್ ಪುಟವೊಂದು ಇಷ್ಟು ಜನರನ್ನು ಆಕರ್ಷಿಸಿರುವುದು ವಿಶೇಷ.

—-
ಇಂಟರ್ನೆಟ್ ಸೆನ್ಸೇಶನ್: ‘ಬ್ರಹ್ಮಂ ಒಕಟೇ’ 66 ಲಕ್ಷ ವೀಕ್ಷಣೆ!
ರಾಹುಲ್ ವೆಲ್ಲಾಲ್ ಹಾಡಿರುವ ಹಾಡುಗಳು ಸಾಮಾಜಿಕ ಜಾಲತಾಣದಲ್ಲಿ ಸಂಚಲನ ಮೂಡಿಸಿವೆ. ಒಂದು ಸಲ ಯೂಟ್ಯೂಬ್ ವೀಡಿಯೋ ಸಾಮಾಜಿಕ ಜಾಲತಾಣಕ್ಕೆ ಹೋಗಿ ರಾಹುಲ್ ವೆಲ್ಲಾಲ್ ಅಂತ ಸರ್ಚ್ ಮಾಡಿದರೆ 11 ವರ್ಷದ ಈ ಪುಟಾಣಿ ಸೃಷ್ಟಿಸಿದ ಆನ್‌ಲೈನ್ ಸಂಚಲನವು ನಿಮ್ಮನ್ನು ದಂಗುಪಡಿಸಬಹುದು. ಪಿಬರೇ ರಾಮರಸಂ ಹಾಡನ್ನು 20 ಲಕ್ಷಕ್ಕೂ ಹೆಚ್ಚು ಮಂದಿ ಆಸ್ವಾದಿಸಿದ್ದರೆ, ಶಿವಾಷ್ಟಕಂ ಹಾಡನ್ನು ಆನಂದಿಸಿದವರು 23 ಲಕ್ಷ ಮಂದಿ, ಮಹಾಲಕ್ಷ್ಮಿ ಅಷ್ಟಕಂ ಮತ್ತು ರಾಮ ಗೋವಿಂದ ಹರಿ ಹಾಡುಗಳು ತಲಾ 14 ಲಕ್ಷ, ಪಲುಕೇ ಬಂಗಾರಮಾಯೆನಾ ಸೆಳೆದವರ ಸಂಖ್ಯೆ 4.72 ಲಕ್ಷ. ಮತ್ತೊಬ್ಬ ಕಿರಿಯ ಗಾಯಕಿ ಸೂರ್ಯಗಾಯತ್ರಿ ಜತೆಗೆ ಹಾಡಿರುವ ಬ್ರಹ್ಮಂ ಒಕಟೇ ಹಾಡು ವೀಕ್ಷಿಸಿದವರು 66 ಲಕ್ಷ! ಈ ಲೆಕ್ಕಾಚಾರ ಸ್ಯಾಂಪಲ್ ಮಾತ್ರ. ಇನ್ನೂ ನೂರಾರು ಹಾಡುಗಳಿವೆ ಸಹಸ್ರ ಸಹಸ್ರ ಸಂಖ್ಯೆಯಲ್ಲಿ ವೀಕ್ಷಣೆಯಾಗಿವೆ. ಇದು ಆತನ ಹಾಡಿನಲ್ಲಿರುವ ಆಕರ್ಷಣೆಯ ಪ್ರತಿಬಿಂಬ.
ಕಿರು ಪರಿಚಯ
ಹೆತ್ತವರು: ರವಿಶಂಕರ್ ವೆಲ್ಲಾಲ್, ಹೇಮಾ ಎಸ್.
ವಯಸ್ಸು 11, 4ನೇ ವರ್ಷಕ್ಕೆ ಸಂಗೀತ ಕಲಿಕೆ ಆರಂಭ
ಪ್ರಸ್ತುತ ಸಂಗೀತ ಗುರು: ವಿದುಷಿ ಕಲಾವತಿ ಅವಧೂತ್
ಮೃದಂಗ ಗುರು: ವಿದ್ವಾನ್ ಕೂಳೂರು ಯು.ಜಯಚಂದ್ರ ರಾವ್
ಪಾಶ್ಚಾತ್ಯ ಪಿಯಾನೋ ಗುರು: ಅಭಿಷೇಕ್ ಎಸ್.ಎನ್.
ವಿದ್ಯಾಭ್ಯಾಸ: 6ನೇ ತರಗತಿ, ಕಾರ್ಮೆಲ್ ಪಬ್ಲಿಕ್ ಸ್ಕೂಲ್ ಶಾಲೆ, ಬೆಂಗಳೂರು
ಕರ್ನಾಟಕ ಸಂಗೀತ ಕಲಿಕೆಗೆ ಕೇಂದ್ರ ಸರಕಾರದಿಂದ ಸ್ಕಾಲರ್‌ಶಿಪ್
ಸಂಗೀತ ವೀಡಿಯೋಗಳು (ಯೂಟ್ಯೂಬ್): ಪಲುಕೇ ಬಂಗಾರಮಾಯೆನಾ, ವೈಷ್ಣವ ಜನತೋ, ಪಿಬರೇ ರಾಮ ರಸಂ, ಬ್ರಹ್ಮಂ ಒಕಟೇ, ಶಿವಾಷ್ಟಕಂ, ಮಹಾಲಕ್ಷ್ಮಿ ಅಷ್ಟಕಂ, ರಾಮ ಗೋವಿಂದ ಹರೇ (ನಿರ್ದೇಶನ: ಕುಲದೀಪ್ ಎಂ.ಪೈ, ಚೆನ್ನೈ)
ವಿದೇಶದಲ್ಲಿ: ಅಬುಧಾಬಿ, ಸಿಂಗಾಪುರ, ನೈಜೀರಿಯಾ

YouTube link:
https://www.youtube.com/c/RahulVellal

Facebook Page: https://www.facebook.com/RahulVellal/

My Story Published in Times Group’s online editions

Vijaya Karnataka Link
Times Of India link
Bengalore Mirror
Mumbai Mirror
Telugu Samayam (TOI Group)
Nav Bharat Times

Avinash B

Avinash B. Tech Writer, Columnist, Working as Online media Journalist for more than two decades. Passionate about Technology and Gadgets. Yakshagana and Music are passion.

Share
Published by
Avinash B

Recent Posts

ರಿಯಲ್‌ಮಿ ನಾರ್ಜೋ 70 ಟರ್ಬೊ 5 ಜಿ, ರಿಯಲ್‌ಮಿ ಬಡ್ಸ್ ಎನ್‌1 ಬಿಡುಗಡೆ: ಬೆಲೆ, ವೈಶಿಷ್ಟ್ಯ ತಿಳಿಯಿರಿ

ಪ್ರಿಯ ಸ್ಮಾರ್ಟ್‌ಫೋನ್ ಬ್ರಾಂಡ್ ಆಗಿರುವ ರಿಯಲ್‌ಮಿ, ನಾರ್ಜೋ 70 ಟರ್ಬೊ 5 ಜಿ ಮತ್ತು ರಿಯಲ್‌ಮಿ ಬಡ್ಸ್ ಎನ್ 1…

1 month ago

ಓದುವಿಕೆ, ಕಲಿಕೆ ಉತ್ತೇಜನಕ್ಕೆ ‘ರೀಡ್-ಅ-ಥಾನ್’: ದಾಖಲೆಯ ಗುರಿ

ಮಕ್ಕಳ ಓದುವಿಕೆ ಮತ್ತು ಪ್ರಾರಂಭಿಕ ಕಲಿಕೆಗೆ ಉತ್ತೇಜನಕ್ಕಾಗಿ ರೀಡ್-ಅ-ಥಾನ್.

1 month ago

Realme 13 +, Realme 13 5ಜಿ ಫೋನ್ ಬಿಡುಗಡೆ: ವೇಗದ ಫೋನ್‌ನ ವೈಶಿಷ್ಟ್ಯಗಳು, ಬೆಲೆ ಇಲ್ಲಿ ತಿಳಿಯಿರಿ

ಭಾರತೀಯ ಯುವಜನರಲ್ಲಿ ಅತ್ಯಂತ ಜನಪ್ರಿಯ ಸ್ಮಾರ್ಟ್ ಫೋನ್ ಬ್ರಾಂಡ್ ಆಗಿರುವ ರಿಯಲ್ ಮಿ ಬಹುನಿರೀಕ್ಷಿತ ರಿಯಲ್ ಮಿ 13 ಸೀರಿಸ್…

2 months ago

e-ಯುಗದ ತನಿಖಾ ಪತ್ರಿಕೋದ್ಯಮ: ಫ್ಯಾಕ್ಟ್ ಚೆಕ್

Fact Check ಎಂಬುದು ಈಗಿನ ತನಿಖಾ ಪತ್ರಿಕೋದ್ಯಮ. ಏನು, ಹೇಗೆ ಎತ್ತ ಎಂಬ ಮಾಹಿತಿ ಇಲ್ಲಿದೆ.

3 months ago

ಯಕ್ಷ ಮಂತ್ರ ಮಾಂಗಲ್ಯ: ಕೀರ್ತನಾ ಪ್ರಸಾದ ಕಲ್ಯಾಣವು

ಹಾಡುಗಾರಿಕೆ, ಚೆಂಡೆ-ಮದ್ದಳೆಯ ಬಿಡಿತ-ಮುಕ್ತಾಯಗಳ ಬಳಿಕ, ಬಂದಿದ್ದ ಗಣ್ಯರು, ಒಂದೊಂದು ಹಾಡಿನಲ್ಲಿ ಅಡಕವಾಗಿರುವ ಮಂತ್ರ ಮಾಂಗಲ್ಯದ ಪ್ರತಿಜ್ಞಾಗುಚ್ಛವನ್ನು ವಿವರಿಸಿ, ವಧು-ವರರಿಗೆ ಬೋಧಿಸಿದರು

8 months ago

ಮುದ್ದಣನ ಕುಮಾರ ವಿಜಯ, ರತ್ನಾವತಿ ಕಲ್ಯಾಣ ಯಕ್ಷಗಾನ ಧ್ವನಿಮುದ್ರಿಕೆ

ಮುದ್ದಣನ ಕುಮಾರ ವಿಜಯದ ಸುಮಾರು 700ರಷ್ಟಿರುವ ಹಾಡುಗಳನ್ನು ಹಾಡಿದ್ದು ತೆಂಕು ತಿಟ್ಟಿನ ಬಲಿಪ ಶೈಲಿಯ ಪ್ರತಿಪಾದಕ ಭಾಗವತರೇ. ಏಳೆಂಟು ವರ್ಷಗಳ…

8 months ago