Categories: myworldOpinion

ಒಂದ್ನಿಮಿಷ ಪ್ಲೀಸ್…!

ಈಗ್ಬಂದೆ ಒಂದ್ನಿಮಿಷ, ಒಂದ್ನಿಮಿಷ ಕೂತ್ಕೊಳ್ಳಿ ಮುಂತಾದ ಪದಸಮೂಹಗಳೊಂದಿಗೆ ‘ಒಂದು ಕ್ಷಣ’ ಅನ್ನೋ ಶಬ್ದವನ್ನು ಎಷ್ಟು ಸುಲಭವಾಗಿ ಹೇಳಿಬಿಡುತ್ತೇವಲ್ಲಾ?

ಜೀವನದಲ್ಲಿ ನಾವು ಯಾವುದೇ ಒಂದು ನಿರ್ಧಾರ ಕೈಗೊಳ್ಳಬೇಕಿದ್ದರೆ, ಆ ಒಂದು ಕ್ಷಣವೇ ಎಷ್ಟೊಂದು ಮುಖ್ಯವಾಗಿಬಿಡುತ್ತದೆ! ಆ ಕ್ಷಣದ ನಿರ್ಧಾರ ತಪ್ಪಿದರೆ ಒಂದೋ ಮುಂದೆ ಪಶ್ಚಾತ್ತಾಪ ಪಡಬೇಕಾಗುತ್ತದೆ, ಅಥವಾ ಆ ಕ್ಷಣದಲ್ಲಿ ತೆಗೆದುಕೊಂಡ ನಿರ್ಧಾರವನ್ನು ಜೀವನವಿಡೀ ಮನಸಾ ಸ್ಮರಿಸಿಕೊಳ್ಳುತ್ತಿರಬಹುದು.

ಇಂಥ ಈ ‘ಕಾಲ’ನ ಆ ಕ್ಷಣಕ್ಕೆ ಎಷ್ಟೊಂದು ಮಹತ್ವವಿದೆ. ಒಂದು ಕ್ಷಣ ತಡವಾದರೆ ರೈಲೋ, ವಿಮಾನವೋ, ಬಸ್ಸೋ ಕೈತಪ್ಪಿಹೋಗಬಹುದು.

ಅದೇ ರೀತಿ ಸಂಬಂಧಗಳೂ. ಅತ್ಯಂತ ಆತ್ಮೀಯರಾದಾಗ ಸಲುಗೆ ಸಹಜವಾಗಿಯೇ ಬೆಳೆಯುತ್ತದೆ. ಆ ಸಲುಗೆಯಿಂದಾಗಿಯೇ ಲೋಕಾಭಿರಾಮ ಹರಟೆ, ಕಷ್ಟ ಸುಖ ಹಂಚಿಕೆ ಸಂದರ್ಭದಲ್ಲಿ ಒಂದು ಕ್ಷಣ ಮೈಮರೆತೋ ಅಥವಾ ಅತಿ ಸಲುಗೆಯಿಂದಲೋ ಒಂದು ಮಾತು ನಮ್ಮ ಬಾಯಿಯಿಂದ ಉದುರಿದರೆ ಅನಾಹುತವೇ ಆಗಿ ಹೋದೀತು. ಆ ಮಾತನ್ನು ಆತ್ಮೀಯರು ಅಪಾರ್ಥ ಮಾಡಿಕೊಂಡರೆ, ಸಂಬಂಧ ಕೆಡುತ್ತದೆ. ಇದಕ್ಕೆ ಬೆಸುಗೆ ಹಾಕಿ ಜೋಡಿಸುವುದು ಒಂದು ನಿಮಿಷದಲ್ಲಿ ಖಂಡಿತಾ ಸಾಧ್ಯವಿಲ್ಲ. ಅಷ್ಟು ವರ್ಷಗಳ ಕಾಲ ಪೋಷಿಸಿಕೊಂಡು ಬಂದಿದ್ದ ಆತ್ಮೀಯತೆ ಕರಗಿ ನೀರಾಗಿ ಹೋಗಲು ಆ ಒಂದು ಕ್ಷಣವಷ್ಟೇ ಸಾಕಲ್ಲವೇ? ಅದೇ ರೀತಿ ಎಷ್ಟೋ ವರ್ಷಗಳ ಕಠಿಣ ಪರಿಶ್ರಮದ ಫಲವೆಲ್ಲಾ ನಾಶವಾಗಲೂ ಇಂಥದ್ದೇ ಒಂದು ಕ್ಷಣ ಸಾಕಲ್ಲವೇ?

ಮಾತು ಆಡಿದರೆ ಹೋಯಿತು, ಮುತ್ತು ಒಡೆದರೆ ಹೋಯಿತು ಎಂಬುದು ಪ್ರಸ್ತುತವಾಗುವುದು ಈ ಕ್ಷಣದಲ್ಲಿಯೇ. ಮನಸ್ಸು ಮನಸ್ಸುಗಳನ್ನು ಬೆಸೆಯುವ ಕಾಯಕಕ್ಕೆ ಎಷ್ಟು ಕಾಲ ತಗುಲುತ್ತದೆಯೋ, ಆ ಬೆಸುಗೆ ಮುರಿದು ಬೀಳಲು ಒಂದು ಕ್ಷಣ ಸಾಕು.

ಅದೇ ರೀತಿ ಆ ಕ್ಷಣದಲ್ಲಿ ನಮ್ಮ ಜೀವನವನ್ನೇ ಬದಲಾಯಿಸಿಬಿಡುವ ನಿರ್ಧಾರಗಳನ್ನು ತೆಗೆದುಕೊಳ್ಳಲು ಆ ಒಂದು ಕ್ಷಣವೇ ತಳಹದಿಯಾಗುತ್ತದೆ.

ಎಲ್ಲರ ಬಾಯಲ್ಲೂ ಹರಿದಾಡುತ್ತಾ ಹರಿದಾಡುತ್ತಾ ಈಗ ಅರ್ಥ ಕಳೆದುಕೊಂಡಂತಾಗಿರುವ ಅಥವಾ ಬಾಯಿಮಾತಿಗಷ್ಟೇ ಸೀಮಿತವಾಗಿಬಿಟ್ಟಿರುವ ‘ಕುಂಬಾರನಿಗೆ ವರುಷ.. ದೊಣ್ಣೆಗೆ ನಿಮಿಷ’ ಎಂಬ ಉಕ್ತಿಯೂ ಇದನ್ನೇ ಅಲ್ಲವೇ ಹೇಳಿದ್ದು? ಸಣ್ಣ ಮಕ್ಕಳಿಗೆ ಗಾದೆ ಮಾತು ಎಂಬ ಕಾರಣಕ್ಕೆ ಇದನ್ನು ಶಾಲೆಗಳಲ್ಲಿ ಹೇಳಿಕೊಟ್ಟಿರುತ್ತಾರೆ. ಆದರೆ ಅದು ಗಾದೆ ಮಾತು ಎಂಬ ಅಂಕ (Mark) ತಂದುಕೊಡುವ ವಾಕ್ಯವಾಗುತ್ತದೆಯೇ ಹೊರತು, ಈ ಮಕ್ಕಳಿಗೆ ಅದರ ಅರ್ಥ ಗ್ರಹಿಸಿಕೊಳ್ಳಬಲ್ಲ ರೀತಿಯಲ್ಲಿ ಬೋಧಿಸಲಾಗುವುದಿಲ್ಲ. ಆದರೆ ಮುಂದೆ ಜೀವನ ರೂಪಿಸಲು, ಜೀವನದಲ್ಲಿ ಔನ್ನತ್ಯ ಸಾಧಿಸಲು, ಯಾವುದೇ ನಿರ್ಧಾರ ಕೈಗೊಳ್ಳುವ ಮೊದಲು ಎರಡೆರಡು ಬಾರಿ ಯೋಚನೆ ಮಾಡಲು ಇದೇ ವಾಕ್ಯವೇ ತಳಹದಿಯಾಗುತ್ತದೆ ಎಂಬುದು ಈ ಮಕ್ಕಳಿಗೇನು ಗೊತ್ತಿರುತ್ತದೆ?

ಅವರಿಗೆ ಬುದ್ಧಿ ತಿಳಿದಾಗಲೊಂದು ದಿನ ‘ಹೌದು, ಇಂಥ ವಾಕ್ಯ ಬರೆದು ನನಗೆ ಇಂತಿಷ್ಟು ಅಂಕ ಬಂದಿದೆ’ ಎಂದಷ್ಟೇ ಅವರು ನೆನಪಿನಲ್ಲಿಟ್ಟುಕೊಳ್ಳುತ್ತಾರೆ. ಅದರ ಅರ್ಥ ಗ್ರಹಿಸಿರುವುದಿಲ್ಲ.

ಒಂದು ಅರೆಕ್ಷಣದಲ್ಲಿ ನಾವು ಕೈಗೊಳ್ಳುವ ನಿರ್ಧಾರವು ಹೇಗೆ ನಮ್ಮ ಜೀವನದ ದಿಕ್ಕನ್ನು ಬದಲಾಯಿಸುತ್ತವೋ, ಅದೇ ರೀತಿ ಒಂದರೆಕ್ಷಣ ಮೈಮರೆತು ನಾವು ಆಡಿದ ನುಡಿಗಳೋ, ಮಾಡಿದ ಕೃತ್ಯಗಳೋ ಜೀವನದ ಬಂಡಿಯ ಗಾಲಿಯನ್ನು ಎತ್ತೆತ್ತಲೋ ತಿರುಗಿಸಿಬಿಡಬಹುದಲ್ಲಾ…

ಆದಕಾರಣ, ‘ಒಂದ್ನಿಮಿಷ ಪ್ಲೀಸ್’ ಅನ್ನೋದು ಜೀವನದ ಪ್ರತಿ ಕ್ಷಣದಲ್ಲೂ ನಿಮ್ಮ ಜತೆಗಿರಲಿ.

Avinash B

Avinash B. Tech Writer, Columnist, Working as Online media Journalist for more than two decades. Passionate about Technology and Gadgets. Yakshagana and Music are passion.

View Comments

Recent Posts

ಓದುವಿಕೆ, ಕಲಿಕೆ ಉತ್ತೇಜನಕ್ಕೆ ‘ರೀಡ್-ಅ-ಥಾನ್’: ದಾಖಲೆಯ ಗುರಿ

ಮಕ್ಕಳ ಓದುವಿಕೆ ಮತ್ತು ಪ್ರಾರಂಭಿಕ ಕಲಿಕೆಗೆ ಉತ್ತೇಜನಕ್ಕಾಗಿ ರೀಡ್-ಅ-ಥಾನ್.

5 days ago

Realme 13 +, Realme 13 5ಜಿ ಫೋನ್ ಬಿಡುಗಡೆ: ವೇಗದ ಫೋನ್‌ನ ವೈಶಿಷ್ಟ್ಯಗಳು, ಬೆಲೆ ಇಲ್ಲಿ ತಿಳಿಯಿರಿ

ಭಾರತೀಯ ಯುವಜನರಲ್ಲಿ ಅತ್ಯಂತ ಜನಪ್ರಿಯ ಸ್ಮಾರ್ಟ್ ಫೋನ್ ಬ್ರಾಂಡ್ ಆಗಿರುವ ರಿಯಲ್ ಮಿ ಬಹುನಿರೀಕ್ಷಿತ ರಿಯಲ್ ಮಿ 13 ಸೀರಿಸ್…

2 weeks ago

e-ಯುಗದ ತನಿಖಾ ಪತ್ರಿಕೋದ್ಯಮ: ಫ್ಯಾಕ್ಟ್ ಚೆಕ್

Fact Check ಎಂಬುದು ಈಗಿನ ತನಿಖಾ ಪತ್ರಿಕೋದ್ಯಮ. ಏನು, ಹೇಗೆ ಎತ್ತ ಎಂಬ ಮಾಹಿತಿ ಇಲ್ಲಿದೆ.

2 months ago

ಯಕ್ಷ ಮಂತ್ರ ಮಾಂಗಲ್ಯ: ಕೀರ್ತನಾ ಪ್ರಸಾದ ಕಲ್ಯಾಣವು

ಹಾಡುಗಾರಿಕೆ, ಚೆಂಡೆ-ಮದ್ದಳೆಯ ಬಿಡಿತ-ಮುಕ್ತಾಯಗಳ ಬಳಿಕ, ಬಂದಿದ್ದ ಗಣ್ಯರು, ಒಂದೊಂದು ಹಾಡಿನಲ್ಲಿ ಅಡಕವಾಗಿರುವ ಮಂತ್ರ ಮಾಂಗಲ್ಯದ ಪ್ರತಿಜ್ಞಾಗುಚ್ಛವನ್ನು ವಿವರಿಸಿ, ವಧು-ವರರಿಗೆ ಬೋಧಿಸಿದರು

7 months ago

ಮುದ್ದಣನ ಕುಮಾರ ವಿಜಯ, ರತ್ನಾವತಿ ಕಲ್ಯಾಣ ಯಕ್ಷಗಾನ ಧ್ವನಿಮುದ್ರಿಕೆ

ಮುದ್ದಣನ ಕುಮಾರ ವಿಜಯದ ಸುಮಾರು 700ರಷ್ಟಿರುವ ಹಾಡುಗಳನ್ನು ಹಾಡಿದ್ದು ತೆಂಕು ತಿಟ್ಟಿನ ಬಲಿಪ ಶೈಲಿಯ ಪ್ರತಿಪಾದಕ ಭಾಗವತರೇ. ಏಳೆಂಟು ವರ್ಷಗಳ…

7 months ago

ಒಂದೇ ಫೋನ್‌ನಲ್ಲಿ ಎರಡು WhatsApp ಖಾತೆ ಬಳಸುವುದು ಹೇಗೆ?

ಕಳೆದ ಅಕ್ಟೋಬರ್ 19ರಂದು ಮೆಟಾ ಒಡೆತನದ WhatsApp ಸಂಸ್ಥೆಯೇ ತನ್ನ ಆ್ಯಪ್‌ಗೆ ಹೊಸ ಅಪ್‌ಡೇಟ್ ನೀಡಿದ್ದು, ಎರಡು ವಾಟ್ಸ್ಆ್ಯಪ್ ಖಾತೆಗಳನ್ನು…

9 months ago