ನವ ವಸಂತದಲಿ ಬದುಕು ‘ನಂದನ’ವನವಾಗಲಿ!

2
632

ಮುಗಿಯಿತು ಎಂಬ ಉದ್ಗಾರವೇ ಹೊಸದೊಂದು ಆರಂಭದ ಮುನ್ಸೂಚನೆ.

ಅಂತೆಯೇ ಇದು ಯಾವುದೇ ಪಾಶ್ಚಾತ್ಯ ಅಂಧಾನುಕರಣೆಯ ಹಬ್ಬದಾಚರಣೆಯಲ್ಲ, ಇದರಲ್ಲಿ ‘ನಮ್ಮ’ ಎಂಬೋ ಆಪ್ತ ಭಾವವು ಮೇಳೈಸಿರುವುದರಿಂದ, ಈ ಯಾಂತ್ರಿಕ ಯುಗದಲ್ಲಿಯೂ ಇದನ್ನು ಸಂಭ್ರಮಿಸುವಾಗ ಸು-ಲಭವಾಗುವ ಮನರಂಜನೆ, ಸಂತೋಷ, ಸಂಭ್ರಮಕ್ಕೆ ಖಂಡಿತಾ ಎಣೆ ಇರಲಾರದು. ಅಲ್ಲವೇ?

ಹಳೆಯ ನೋವುಗಳನ್ನು ಮರೆತು, ಹೊಸ ನಿರೀಕ್ಷೆಗಳಿಗೆ ಒಡ್ಡಿಕೊಳ್ಳುವುದೋ, ಅಥವಾ ಹೊಸ ಹೊಸದಾದ ಚಿತ್ರ ವಿಚಿತ್ರ ನೋವುಗಳಿಗೆ ಮನಸ್ಸನ್ನು ಸಜ್ಜುಗೊಳಿಸುವುದೋ… ಇಂಥದ್ದೊಂದು ಭಾವವನ್ನು ಜನರು ಬಹಿರಂಗದಲ್ಲಿ ಅಲ್ಲದಿದ್ದರೂ ಆಂತರಂಗಿಕವಾಗಿ ವಿಭಿನ್ನವಾಗಿ, ವೈವಿಧ್ಯಮಯವಾಗಿ ವ್ಯಾಖ್ಯಾನಿಸಬಹುದು. ಈ ಪರಿಯ ನಿರಾಶಾವಾದಕ್ಕೆ, ವಿಷಾದ ಯೋಗಕ್ಕೆ ಕಾರಣವೇನು? ಸಂದು ಹೋದ ವರ್ಷಗಳತ್ತ ಹಿನ್ನೋಟ ಹರಿಸಿದರೆ, ಬಡ ಭಾರತೀಯರ ಬಗೆಗೆ ಒಂದೆಡೆ ಪ್ರಕೃತಿದೇವಿಯೂ ಮುನಿಸಿಕೊಂಡಿದ್ದಾಳೆ, ಆಳುವವರೂ ಪ್ರಜೆಗಳ ದುಸ್ಥಿತಿಗೆ ಅಂಜದೆ, ಮರುಗದೆ, ಕರಗದೆ ಕರ-ತೆರಿಗೆ ಇತ್ಯಾದಿ ಹೇರಿ ಮತ್ತಷ್ಟು ಜರ್ಝರಿತಗೊಳಿಸುತ್ತಿದ್ದಾರೆ. ಇಂಥದ್ದೊಂದು ಸಡಗರಕ್ಕೆ ಹಬ್ಬದಾಚರಣೆ ಬೇರೆ ಬೇಕೇ ಎಂಬುದು ಜನ ಸಾಮಾನ್ಯನ ಒಡಲಾಳದ ನೋವಿನ ದನಿ.

ಹೀಗಿದ್ದರೂ, ಸಂಘ ಜೀವಿಯಾದ ಮಾನವನಿಗೆ ಸಂಭ್ರಮಿಸುವುದಕ್ಕೆ ಕಾರಣಗಳು ಬೇಕಿಲ್ಲ. ಇಂಥಹಾ ಹಬ್ಬದ ಆಚರಣೆಗಳು ಮಾತ್ರವಷ್ಟೇ ನೊಂದು ಬೆಂದ ಮನಸ್ಸುಗಳಿಗೆ ಸಾಂತ್ವನ ನೀಡಬಲ್ಲವು. ಆ ದಿನವಾದರೂ ದೈನಂದಿನ ಬದುಕಿನ ಜಂಜಡಗಳನ್ನು ಮನದ ಮೂಲೆಯಲ್ಲಿ ಬಚ್ಚಿಟ್ಟು, ಹೊಸತನಕ್ಕೆ ಮನಸ್ಸನ್ನು ಬಿಚ್ಚಿಡೋಣ ಎನ್ನುತ್ತಲೇ ಕುಟುಂಬಿಕರೊಂದಿಗೆ ನಲಿಯಲು, ಬೆರೆಯಲು ಮುಂದಾಗುತ್ತೇವೆ.

ಕಾಲನಿಗೆ ಎಲ್ಲವನ್ನೂ ಮರೆಸುವ ಶಕ್ತಿಯಿದೆ. ಈ ಮಾತು ನೋವಿನ ಕ್ಷಣಗಳಿಗೂ ಹೊರತಲ್ಲ. ಕಾಲನ ಸ್ಥಿತ್ಯಂತರ ಅನಿವಾರ್ಯ. ಹಳೆಯ ಯುಗ ಕಳೆದು ಹೊಸ ಯುಗವೊಂದರ ಉದಯವಾಗುತ್ತಲೇ ಹೊಸ ಹೊಸ ನಿರೀಕ್ಷೆಗಳು, ಸಡಗರ ಸಂಭ್ರಮಗಳ ಚಿಲುಮೆಯಾಗಲು ಈ ರೀತಿಯ ಆಚರಣೆಯು ಒಂದು ವೇದಿಕೆ ಒದಗಿಸುತ್ತದಷ್ಟೆ. ಯಾಕೆಂದರೆ ಮನುಷ್ಯ ಯಾವತ್ತೂ ಭವ್ಯ ಭವಿತವ್ಯದ ನಿರೀಕ್ಷೆಯಲ್ಲೇ ಬದುಕುತ್ತಿರುವವನು. ಈಗೇನಿದ್ದರೇನಂತೆ, ಮುಂದೊಂದು ದಿನ ಎಲ್ಲವೂ ಸರಿ ಹೋದೀತು ಅಂತ ಸಂದ ವರ್ಷದಲ್ಲಿ ಕುಗ್ಗಿ ಹೋದವರು ಆಶಾಭಾವನೆಯಿಂದ ಹೊಸ ವರ್ಷಕ್ಕೆ ಕಾಲಿಟ್ಟರೆ, ಈಗಿನ ಸುಖ ಸಂತಸಗಳನ್ನು ಮತ್ತಷ್ಟು ಹೆಚ್ಚಿಸಿಕೊಳ್ಳಲು, ಜೀವನವನ್ನು ಪರಿಪೂರ್ಣವಾಗಿ ಅನುಭವಿಸಲು ಮಗದೊಂದು ವರುಷ ಬಂದು ಪುನರಪಿ ಅವಕಾಶ ನೀಡಲಿದೆ ಎಂಬ ಯೋಚನೆ, ಅದಾಗಲೇ ಸುಖ ಸಂತೋಷದಲ್ಲಿ ತೇಲಾಡುತ್ತಿರುವವರ ಮನದಲ್ಲಿ.

ಈ ನಿರೀಕ್ಷೆಗಳೇ ತಾನೇ ಮಾನವ ಜೀವನವನ್ನು ರಂಗು ರಂಗಾಗಿಸುವುದು? ಆತನ ಮನದ ಈ ತುಡಿತಗಳೇ ತಾನೇ ಬರಲಿರುವ ಭವಿಷ್ಯತ್ತಿನ ಸವಾಲುಗಳನ್ನು ಎದುರಿಸಲು ಪ್ರೇರಣೆಯೂ ಆಗೋದು? ಕವಿವಾಣಿಯಂತೆ, ಬಯಕೆ ತೋಟದ ಬೇಲಿಯೊಳಗೆ ಹೊಸ ನಿರೀಕ್ಷೆಗಳು ರಿಂಗಣಿಸುತ್ತಲೇ ಇರುತ್ತವೆ. ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿವುದೇ ಜೀವನ? ಅಂತಲೂ ಕೇಳಿದ್ದಾರೆ ಅಡಿಗರು. ಕವಿಯ ಆಶಯವೇನಿತ್ತೋ… ಆದರೆ ಈ ಸಾಲು ನೀಡುವ ಅರ್ಥ ನೂರಾರು. ಇದರ ಕೊನೆಯಲ್ಲಿ ಸ್ಥಿರ ಭಾವ ಇಲ್ಲ, ಬದಲಾಗಿ ಒಂದು ಪ್ರಶ್ನಾರ್ಥಕ ಚಿಹ್ನೆಯಿದೆ. ಬದುಕು ಕೂಡ ಇದೇ ರೀತಿ ಪ್ರಶ್ನಾರ್ಥಕವಾಗಿಯೇ ಮುನ್ನಡೆಯುತ್ತಿರುವ ಪಯಣ. ‘ಇರದುದರೆಡೆಗೆ ತುಡಿಯುವುದೇ ಜೀವನ.’ ಅಂತ ಪೂರ್ಣವಿರಾಮದೊಂದಿಗೆ ದೃಢ ಭಾವವಿದ್ದರೆ ಅದಕ್ಕೊಂದು ಅರ್ಥ, ಇರದುದರತ್ತಲೇ ಜೀವನ ತುಡಿಯುತ್ತದೆಯೇ? ಎಂಬ ಪ್ರಶ್ನಾರ್ಥಕ ಭಾವ ಮತ್ತೊಂದು ಅರ್ಥ.

ಏನೇ ಇರಲಿ, ಇದು ಜೀವನ. ಯುಗದ ಆದಿಯ ದಿನ ಕೆಟ್ಟ ಘಳಿಗೆಗಳನ್ನೆಲ್ಲಾ ಬೇವು ಎಂಬಂತೆ ಮರೆತು ನವ ಯುಗದ ಆದಿಯನ್ನು ಸ್ವಾಗತಿಸಲು ಸಿದ್ಧರಾಗೋಣ. ವಾಸ್ತವಿಕ ಪ್ರಪಂಚದಲ್ಲಿಯೂ ನಿಜ ವೈರಿಗಳನ್ನು ಪ್ರೀತಿಯಿಂದಲೇ ಗೆಲ್ಲಬಹುದಲ್ಲವೇ? ಸ್ವಾಗತಿಸೋಣವಂತೆ. ಆ ಒಂದು ಅನರ್ಘ್ಯ ನಿಯಮವನ್ನು ಅನುಸರಿಸಲು ಸಿದ್ಧರಾಗಬೇಕಿದೆ ಜನ. ಹೊಸ ವರ್ಷ, ಹೊಸ ಹರ್ಷ, ಹೊಸ ಆಶಾವಾದ, ನವ ಭರವಸೆಗಳ ಒಸಗೆ, ಸರ್ವರ ಜೀವನದಲ್ಲಿಯೂ ಚಿಗುರೊಡೆಯಬೇಕು. ಆಶಾವಾದವೇ ಮನುಷ್ಯನ ಜೀವನೋತ್ಸಾಹಕ್ಕೆ, ಬೆಟ್ಟದಷ್ಟು ಕನವರಿಕೆಗಳಿಗೆ ಮೂಲ ಪ್ರೇರಣೆಯಾಗುತ್ತದೆ. ಹೀಗಿರಲು, ಯುಗಾದಿ ಹಬ್ಬದಂದು ನೋವ ಮರೆತು ನಲಿವಿಗಾಗಿ ಕಾತರಿಸೋಣ. ಈ ಮೂಲಕ ತುಕ್ಕು ಹಿಡಿದಂತಿರುವ ಮನಸ್ಸಿಗೆ ಒರೆ ಹಚ್ಚಿ ಶುಭ್ರಗೊಳಿಸಿ, ಹೊಸ ಸಂವತ್ಸರಕ್ಕೆ ಸಿದ್ಧಗೊಳಿಸೋಣ.

ಇದು ನಮ್ಮದೇ ಹಬ್ಬ ಕಣ್ರೀ!

ಮೊನ್ನೆ ಮೊನ್ನೆಯಷ್ಟೇ ಮನೆಯ ಗೋಡೆಯಲ್ಲಿದ್ದ ಕ್ಯಾಲೆಂಡರ್ ಬದಲಾಯಿಸಿದ್ದವಲ್ಲ…? ಅರೆ! ಇಷ್ಟು ಬೇಗ ಕಳೆದು ಹೋಯಿತೇ ಈ ಒಂದು ವರ್ಷ? ಇದೆಂಥಾ ಹಬ್ಬ! ಎಂದಚ್ಚರಿ ವ್ಯಕ್ತಪಡಿಸುವವರೂ ಇರುತ್ತಾರೆ ಎಂಬುದು ಖಂಡಿತಾ ಉತ್ಪ್ರೇಕ್ಷೆಯಲ್ಲ. ಪಾಶ್ಚಾತ್ಯರನ್ನು ನಾವೆಷ್ಟು ಅನುಕರಿಸುತ್ತೇವೆಂದರೆ, ನಮ್ಮದೇ ಹಬ್ಬವನ್ನು, ಇನ್ಯಾರದೋ ಹಬ್ಬವಾಗಿರಬಹುದು ಎಂಬಷ್ಟರ ಮಟ್ಟಿಗೆ ಮರೆತುಬಿಟ್ಟು, ಅದೇನೋ ಹೊಸ ಹಬ್ಬ ಎಂಬ ಕಾರಣಕ್ಕಾಗಿ ಆಚರಿಸತೊಡಗಿದ್ದೇವೆಯೋ ಎಂದು ಭಾಸವಾಗುವುದು ಮೆಟ್ರೋಪಾಲಿಟನ್ ಸಂಸ್ಕೃತಿಯ ದುರಂತ. ಆದರೆ ಇದು ನಮ್ಮ ಹೊಸ ವರ್ಷ. ಇದು ನಮ್ಮ ಮನದ, ನಮ್ಮ ಮಣ್ಣಿನ, ಶುದ್ಧ ಭಾರತೀಯ ಸಂಸ್ಕೃತಿಯ ನವ ವಸಂತದ ಸಂಕೇತವಾದ ಹೊಸ ವರ್ಷದ ಸಂಭ್ರಮ.

ಡಿಸೆಂಬರ್ 31ರ ನಿಶೆಯ, ಜನವರಿ 1ರ ನಶೆಯ ಸಂಭ್ರಮೋಲ್ಲಾಸಗಳಿಗೆ ಹೋಲಿಸಿದರೆ ನಮ್ಮದೇ ಎಂದು ಎದೆ ತಟ್ಟಿಕೊಂಡು ಹೇಳಬಹುದಾದ ಹೊಸ ವರ್ಷದ ಸಡಗರಕ್ಕಿರುವ ಸವಿಯೇ ಬೇರೆ. ಕ್ರಿಸ್ತ ಶಕೆ ಆರಂಭವಾದ ದಿನ ಎಂಬ ಕಾರಣಕ್ಕೆ ಜನವರಿ 1ನ್ನು ಇಡೀ ಜಗತ್ತೇ ಹೊಸ ವರ್ಷದ ದಿನ ಎಂದು ಒಪ್ಪಿಕೊಂಡು ಅಪ್ಪಿಕೊಂಡು ಸಂಭ್ರಮದಿಂದ ನಲಿದಾಡುತ್ತಿದ್ದರೆ, ಪ್ರತಿಯೊಂದಕ್ಕೂ ಇಂಗ್ಲಿಷ್ ಕ್ಯಾಲೆಂಡರನ್ನೇ ಅನುಸರಿಸುವ ಭಾರತೀಯರೂ ಇದನ್ನು ಆಚರಿಸುವುದರಲ್ಲಿ ತಪ್ಪಿಲ್ಲ ಎಂಬ ಸಮರ್ಥನೆಯೊಂದಿಗೆ, ಅದನ್ನು ಪಾಶ್ಚಾತ್ಯ ಸಂಸ್ಕೃತಿಯಂತೆಯೇ ಆಚರಿಸುತ್ತೇವೆಯಾದರೆ, ನಮ್ಮ ಯುಗದ ಆದಿಯನ್ನು ನಾವು ನಮ್ಮತನದೊಂದಿಗೆ, ಯಾವುದೇ ಸಿನಿಕತನಗಳಿಲ್ಲದೆಯೇ, ಹೃದಯಕ್ಕೆ, ಮನಸ್ಸಿಗೆ ಆಪ್ತವಾಗಿ, ಮನೋಲ್ಲಾಸ ತುಂಬಿಕೊಂಡು ಸಂಭ್ರಮಿಸುತ್ತೇವೆ.

ಹೊಸ ವರ್ಷದ ಮೆಟ್ಟಿಲೇರುವ ಮುಂಚೆಯೊಮ್ಮೆ ಹಳೆಯ ವರ್ಷದ ಮೆಟ್ಟಿಲಲ್ಲಿ ನಿಂತು, ಏರಿ ಬಂದ ಪಯಣದ ಹಾದಿಯ ಹಿಂದೊಮ್ಮೆ ದೃಷ್ಟಿ ಹರಿಸಿ, ಶನಿ ಹೋಯಿತು ಅಂತ ಹಳೆಯ ನೋವುಗಳನ್ನೆಲ್ಲಾ ಮರೆತು ನೆಮ್ಮದಿಯ ನಿಟ್ಟುಸಿರಿನೊಂದಿಗೆ ಹೊಸ ಬದುಕಿಗೆ ಅಡಿಯಿಡೋಣ. ಬದುಕು ಸವಿಜೇನಾಗಲಿ, ಸುಖದ ಗೂಡಾಗಲಿ, ಸಂತಸದ ಹೊನಲಾಗಲಿ. ಬರಲಿರುವ ನಂದನ ಸಂವತ್ಸರವು ಬದುಕನ್ನು ನಂದನವನವನ್ನಾಗಿಸಲಿ.

ವಿಜಯ ಕರ್ನಾಟಕದಲ್ಲಿ ಪ್ರಕಟ:
http://vijaykarnatakaepaper.com/pdf/2012/03/21/20120321l_012101001.jpg
http://vijaykarnatakaepaper.com/pdf/2012/03/21/20120321l_012101005.jpg

2 COMMENTS

LEAVE A REPLY

Please enter your comment!
Please enter your name here