ಕನ್ನಡ ಲಿಪಿ ಸರಳೀಕರಣ: ಬದಲಾವಣೆಯ ಹೆಸರಲ್ಲಿ ಅಧ್ವಾನ ಬೇಡ

5
1046

[ವಿಜಯ ಕರ್ನಾಟಕದಲ್ಲಿ ಪ್ರಕಟವಾದ ನನ್ನ ಲೇಖನ]

ಒಂದು ವಿಷಯ, ವಸ್ತು, ವ್ಯಕ್ತಿಯ ಬಗ್ಗೆ ಹೆಚ್ಚು ಪ್ರೀತಿ ಹುಟ್ಟುವುದು ಯಾವಾಗ? ಅವು/ಆ ವ್ಯಕ್ತಿ ನಮ್ಮಿಂದ ದೂರವಿದ್ದಾಗ. ಇದು ಅನುಭವದ ಮಾತು. ಆರು ವರ್ಷ ಚೆನ್ನೈಯಲ್ಲಿದ್ದು ಕನ್ನಡ ನಾಡಿಗೆ ಮರಳಿದಾಗ, ಕನ್ನಡವನ್ನು ದಿನವಿಡೀ ಕೇಳತೊಡಗಿದಾಗ ಮತ್ತು ಕನ್ನಡ ಲಿಪಿಯ ಸರಳೀಕರಣ ಕುರಿತು ‘ಸಾಪ್ತಾಹಿಕ ಲವಲವಿಕೆ’ಯಲ್ಲಿ ನಡೆಯುತ್ತಿರುವ ಸಂವಾದ ಸರಣಿಯನ್ನು ಓದಿದಾಗ, ನನ್ನ ಅನುಭವಗಳನ್ನೂ ಹಂಚಿಕೊಳ್ಳಬೇಕೆನಿಸಿತು.

ತಮಿಳೇ ನಮಗೆ ಮಾದರಿ ಎಂಬರ್ಥದ ವಾದವನ್ನು ಕೇಳುವಾಗ ನನಗೆ ಕಾಡುವುದು ವ್ಯಂಜನಗಳಲ್ಲಿ ಕ, ಙ, ಚ, ಞ, ಟ, ಣ, ತ, ನ, ಪ, ಮ ಮಾತ್ರವೇ ಇರುವ ಆ ಭಾಷಿಕರೊಂದಿಗೆ ಶಾಬ್ದಿಕ ಸಂವಹನ ಹೇಗೆ ನಡೆಸುವುದು ಎಂಬ ಪ್ರಶ್ನೆ. ಇದಕ್ಕೆ ಹಲವು ಉದಾಹರಣೆಗಳನ್ನು ನೀಡಬಹುದು. ರಾಹುಲ್ ಗಾಂಧಿ ಚೆನ್ನೈಗೆ ಭೇಟಿ ಕೊಟ್ಟಾಗ ಇಂಗ್ಲಿಷ್ ಪತ್ರಿಕೆಗಳಲ್ಲೂ ಪ್ರಕಟವಾಗಿದ್ದು ರಾಕುಲ್ ಗಾಂಧಿ ಎಂಬ ಸ್ಪೆಲ್ಲಿಂಗೇ! ಇನ್ನೊಂದು ಅನುಭವ ಕೇಳಿ. ವೆಸ್ಟ್ ಮಾಂಬಳಂ ಎಂಬಲ್ಲಿರುವ ಹೋಟೆಲಿನ ಬೋರ್ಡನ್ನು ನಾನು ಬಕ್ಯ ಎಂದು ಓದಿದಾಗ ತಮಿಳು ಗೆಳೆಯರು ಬಿದ್ದು ಬಿದ್ದು ನಕ್ಕಿದ್ದರು. ಅದು ನಿಜಕ್ಕೂ ಭಾಗ್ಯ ಹೋಟೆಲ್! ಆದರೆ ಸ್ಪೆಲ್ಲಿಂಗ್ ಮಾತ್ರ ಹಾಗೆ! ಅವರು ಅತಿಥಿ, ಭಾಭೀ, ಭಗವಾನ್ ಎಂಬಿತ್ಯಾದಿ ಪದಗಳನ್ನು ಬರೆಯಲು ತಿಣುಕಾಡುವುದನ್ನು ಕಂಡಿದ್ದೇನೆ, ಕೇಳಿದ್ದೇನೆ. ಅದು ಒತ್ತಟ್ಟಿಗಿರಲಿ, ಅಂತರ್ಜಾಲದಲ್ಲಿ ಸರ್ವಸ್ವವನ್ನೂ ನಮ್ಮ ಮುಂದಿಡುವ ‘ಗೂಗಲ್’ ಅನ್ನು ‘ಕೂಕುಲ್’ ಅಂತ ಕರೆದರೆ ಯಾರಿಗೇನಾಗಬೇಡ? ವಿಷಯವೇನೆಂದರೆ ಅವರಿಗೆ ತಮ್ಮ ತಮಿಳು ಲಿಪಿಯಲ್ಲಿರುವಂತೆಯೇ ಆಂಗ್ಲದಲ್ಲಿಯೂ K-G (ಕ-ಗ), T-D (ತ-ದ), P-B (ಪ-ಬ) ಗಳ ನಡುವೆ ವ್ಯತ್ಯಾಸವೇ ಇಲ್ಲವೆಂಬಂತಹಾ ಮನೋಭಾವನೆ ಬಂದುಬಿಟ್ಟಿದೆ ಅನಿಸುತ್ತದೆ.

ಇನ್ನೊಂದು ಉದಾಹರಣೆ. ತಮಿಳುನಾಡು ಪ್ರದೇಶ ಕಾಂಗ್ರೆಸ್‌ನ ಮಾಜಿ ಅಧ್ಯಕ್ಷ ತಂಗಬಾಲು ಎಂಬ ಹೆಸರನ್ನು ತಂಗಬಾಲು ಅಂತಲೇ ಉಚ್ಚರಿಸುತ್ತಾರಾದರೂ, ತಮಿಳು ಲಿಪಿಯಲ್ಲಿ ಬರೆಯುವಂತೆಯೇ ಇಂಗ್ಲೀಷಿನಲ್ಲೂ ತಂಗ್‌ಕಬಾಲು (Tangkabalu ತ-ಇಂಗ್-ಕ-ಬಾ-ಲು) ಎಂದೇ ಬರೆಯುತ್ತಾರೆ. ಇದರ ಕನ್ನಡೀಕರಣಕ್ಕೆ ಹೊರಟಾಗ ತಬ್ಬಿಬ್ಬಾಗುವುದು ಸಹಜ. ಅಂದರೆ ಅರ್ಧಾಕ್ಷರಗಳ ವಿಭಜನೆ ಯಾವ ರೀತಿಯಿದೆ ಎಂದರೆ, ತಂಗ ಎಂಬುದನ್ನು ನಾವು ತಂ ಮತ್ತು ಗ ಎಂದು ವಿಂಗಡಿಸಿದರೆ, ಅವರು ಇಂಗ್ಲಿಷಿನಂತೆಯೇ ತ (ta), ಇಂಗ್(ng) ಮತ್ತು ಕ (ka) ಎಂದು ವಿಂಗಡಿಸುತ್ತಾರೆ. (ಅಲ್ಲಿ ವ್ಯಂಜನಗಳು ಇಕ್ ಇಂಗ್ ಇಚ್ ಇಂಜ್ ಇಟ್ ಇನ್ ಇಮ್…. ಈ ಅರ್ಧಾಕ್ಷರಗಳ ರೂಪದಲ್ಲಿರುತ್ತದೆ. ಅಂದರೆ ಹಲಂತ ಅಕ್ಷರಗಳನ್ನು ಓದುವುದು ಕಷ್ಟ ಎಂಬ ಕಾರಣಕ್ಕೆ ಇ ಎಂಬ ಸ್ವರಾಕ್ಷರದಿಂದ ಆರಂಭಿಸಲಾಗುತ್ತದೆ).

ಇನ್ನು ಕ-ಕಾರ, ಗ-ಕಾರಗಳ ವ್ಯತ್ಯಾಸವು ಧ್ವನಿಯಲ್ಲಿ ಮಾತ್ರವಷ್ಟೇ ಹೊರತು, ಲಿಪಿಯಲ್ಲಿ ಇಲ್ಲ ಎಂಬ ಕಾರಣವು ಸಮಸ್ಯೆ ಉಂಟುಮಾಡದಿರಲಿ ಅಂತಲೋ ಅಥವಾ ನಮ್ಮದು ಸಂಸ್ಕೃತದ ಬೇರು ಅಲ್ಲ ಅಂತಲೋ ಹೇಳಿಕೊಳ್ಳುವುದಕ್ಕೆಂದೇ ಪ್ರತಿಯೊಂದಕ್ಕೂ ತಮಿಳು ಪದಗಳನ್ನು ಕಂಡುಹುಡುಕಿ ಬಳಸುತ್ತಿದ್ದಾರೆ ಎನ್ನುವುದು ಮೆಚ್ಚಬೇಕಾದ ಅಂಶ. ಗಣಪತಿ ಎಂದರೆ ಅದು ಕಣಬದಿ ಎಂದಾಗುವ ಅಪಾಯವಿದೆಯಲ್ಲಾ… ಅದನ್ನು ತಪ್ಪಿಸಲು ಏನು ಮಾಡಬೇಕು? ಆ ದೇವರಿಗೂ ತಮಿಳು ಹೆಸರನ್ನೇ ಕೊಡೋಣವೆಂದುಕೊಂಡು ಪುಳ್ಳೆಯಾರ್ ಅಂತ ಕರೆದರು ವಿಘ್ನೇಶ್ವರನನ್ನು. ಮಹಾವಿಷ್ಣುವನ್ನು ಪೆರುಮಾಳ್ ಆಗಿಯೂ, ಈಶ್ವರನನ್ನು ಸಿವನ್ ಆಗಿಯೂ, ಷಣ್ಮುಖನನ್ನು ಆರ್ಮುಗಂ ಆಗಿಯೂ, ದುರ್ಗೆಯನ್ನು ಅಂಬಾಳ್ ಆಗಿಯೂ ಪೂಜಿಸಲಾರಂಭಿಸಿದರು. ಸಂಸ್ಕೃತ ಕಷ್ಟವಾಗುತ್ತದೆ ಎಂದುಕೊಂಡು ತಮಿಳು ಮಂತ್ರಗಳನ್ನೇ ಮಾಡಿಕೊಂಡಿದ್ದಾರವರು. ಅಂಥ ಒಂದು ಸಾಲು – ಸ್ರೀ ಮಗಾ ಗಣವತತೇ ನಮಗಾ! (ಅರ್ಥವಾಗಲಿಲ್ವೇ? ಶ್ರೀ ಮಹಾ ಗಣಪತಯೇ ನಮಃ) ಲಿಪಿ ಸರಳೀಕರಣಕ್ಕೆ ಹೋಗಿ, ಬರೆಯುವುದಕ್ಕೂ- ಓದುವುದಕ್ಕೂ ಸಂಬಂಧವೇ ಇಲ್ಲದಂತಾದರೆ ಹೀಗಾಗುತ್ತದೆ ಎಂಬುದಕ್ಕೆ ಇಷ್ಟು ಹೇಳಬೇಕಾಯಿತು.

ಭಾಷೆ ಇರುವುದು ಸಂವಹನಕ್ಕೆ ಎಂಬ ಮೂಲಸೂತ್ರವನ್ನಿಟ್ಟುಕೊಂಡರೆ ಅಲ್ಪಪ್ರಾಣ, ಮಹಾಪ್ರಾಣಗಳು ಬೇಡ, ತಮಿಳಿನಲ್ಲಿರುವಂತೆ ಕನಿಷ್ಠ ಅಕ್ಷರಗಳಲ್ಲೇ ಮಾತು ಮುಗಿಸಿಬಿಡೋಣ ಎಂಬ ವಾದಕ್ಕೆ ನನ್ನ ತಕರಾರು ಇದೆ.

ಮಹಾಪ್ರಾಣ ಉಚ್ಚಾರಕ್ಕೆ ಕಷ್ಟ, ಬಳಕೆಗೆ ಕಷ್ಟ ಎಂದೆಲ್ಲಾ ಆರೋಪಿಸಲಾಗುತ್ತದೆ. ಆದರೆ, ಹ-ಅ; ನ-ಣ; ಲ-ಳ ಬದಲಾದರೆ ಗ್ರಂಥಭಾಷೆಯಿರಲಿ, ಆಡುಭಾಷೆಯೂ ಎಷ್ಟು ಅಧ್ವಾನಕ್ಕೊಳಗಾಗಬಹುದು? ದನಕ್ಕೂ ಧನಕ್ಕೂ ವ್ಯತ್ಯಾಸವಿಲ್ಲದಂತಾಗಬಹುದು, ವಿಫಲ ಹೋಗಿ ವಿಪುಲವೂ ಆದೀತು. ಉಲಿಯುವುದು ಉಳಿ ಆಗಬಹುದು. ಹೀಗಾಗಿ, ಮಹಾಪ್ರಾಣಗಳು ಇರುವುದರಿಂದಲೇ ಕನ್ನಡ ಕಲಿಕೆ ಕಷ್ಟ ಎಂಬ ವಾದ ಒಪ್ಪತಕ್ಕದ್ದಲ್ಲ. ಸುನಾಥ ದೇಶಪಾಂಡೆಯವರು (ವಿ.ಕ. 9 ಅಕ್ಟೋಬರ್ 2011) ಈ ಬಗ್ಗೆ ಜಾಯಮಾನಕ್ಕಿಂತ ಕಾಲಮಾನವೇ ದೊಡ್ಡದು ಎಂದು ವಿವರಿಸಿದ್ದಾರೆ.

ಲಿಪಿ ಸರಳೀಕರಣ ವಿಷಯದಲ್ಲಿ ಸಚಿನ್ ಕುಮಾರ್ ಹೀರೇಮಠ (ಸಾಪ್ತಾಹಿಕ, ಅ.30) ಅವರ ‘ಒಂದೇ ರೀತಿಯ ಧ್ವನಿಯುಳ್ಳ ಅಕ್ಷರಗಳನ್ನು ನಿವಾರಿಸುವ’ ಸಲಹೆ ಸೂಕ್ತವೆನಿಸಿದೆ. ಭಾಷೆಯ ಸೌಂದರ್ಯ ಕೆಡಬಾರದು ಎನ್ನುವುದರಲ್ಲಿ ಎರಡು ಮಾತಿಲ್ಲ. ಹಿರಿಯರಾದ ನಿ.ಉಮಾಕಾಂತ (ಸಾಪ್ತಾಹಿಕ. ಅ.16) ಅವರು ಹೇಳಿರುವ ದ್ವಿತ್ವ ಶಬ್ದಗಳ ಬರವಣಿಗೆ ಶೈಲಿಯು ಬಹುತೇಕ ತಮಿಳನ್ನು (ಮೇಲೆ ‘ತಂಗಬಾಲು’ ಬಗ್ಗೆ ವಿವರಿಸಿದಂತೆ) ಹೋಲುವಂತಿದೆ. ಆ ಕಾರಣಕ್ಕೆ ಇದನ್ನು ವಿರೋಧಿಸುತ್ತಿಲ್ಲ, ಆದರೆ ಇದು (‘ಯುಕ್ತಾಕ್ಷರ’ ಎಂಬುದನ್ನು ‘ಯುಕ್‌ತಾಕ್‌ಷರ’ ಅಂತ ಬರೆಯುವುದು) ಭಾಷಾ ಸೌಂದರ್ಯವನ್ನು ಕೆಡಿಸಬಹುದು. ಮಿ.ವೆಂ.ಶ್ರೀನಿವಾಸರು ಚರ್ಚೆಯನ್ನು ಆರಂಭಿಸಿದ ಲೇಖನದಲ್ಲಿ (ಸಾಪ್ತಾಹಿಕ ಆ.14) ತಿಳಿಸಿದ ಕನ್ನಡ ಬರವಣಿಗೆಯ ಸುಧಾರಣೆಯ ವಿಧಾನ -1 ಇಂಥದ್ದು. ಬಹುಶಃ ಇದನ್ನು ಯಾರು ಕೂಡ ಒಪ್ಪಲಾರರು. ಆದರೆ ಅವರೇ ಉಲ್ಲೇಖಿಸಿದ ಸುಧಾರಣೆ ವಿಧಾನ 2 ನ್ನು ನೋಡಿದರೆ, ಮತ್ತು ಅವರೇ ಹೇಳಿದಂತೆ ‘ಕನ್ನಡವು ಒಂದು ಜೀವಂತ ಭಾಷೆ ಮತ್ತು ಬದಲಾವಣೆಗಳಿಗೆ ಸ್ಪಂದಿಸುತ್ತದೆ’ ಎಂಬ ಆಗ್ರಹಪೂರ್ವಕ ಮಾತಿನೇಟನ್ನೂ ಗಮನಿಸಿದರೆ, ಮತ್ತು ಅನ್ಯಭಾಷಿಕರಿಗೂ ಕನ್ನಡವು ಕಬ್ಬಿಣದ ಕಡಲೆಯಾಗದಂತಿರಲಿ ಎಂಬ ಆಶಯವನ್ನೂ ನೋಡಿದರೆ, ಒಪ್ಪಬಹುದು. ಇದರಲ್ಲಿಯೂ ಒಂದು ಕೊರೆ ಇದೆ. ಉದಾಹರಣೆಗೆ ಸ್ವಾಸ್ಥ್ಯ ಇದನ್ನು ಬರೆಯೋದು ಹೇಗೆ? ‘ಸ್‌ವಾಸ್‌ಥ್‌ಯ’ ಎಂಬುದು ಸ್ವೀಕಾರಾರ್ಹವಾಗಲಾರದು. ಈ ಬಗ್ಗೆ ಮತ್ತಷ್ಟು ಬೆಳಕು ಚೆಲ್ಲಬೇಕಾಗಿದೆ.

ಒಟ್ಟಿನಲ್ಲಿ, ನಮ್ಮ ಭಾಷೆಯನ್ನು ನಾವೇ ಉತ್ತುಂಗಕ್ಕೇರಿಸೋಣ. ಕುರಿತೋದದೆಯುಂ ಕಾವ್ಯಪ್ರಯೋಗಪರಿಣತಮತಿಗಳ್ ಆಗಿರುವ ಕನ್ನಡಿಗರ ಸಿರಿನುಡಿಯನ್ನು ಮತ್ತಷ್ಟು ಸುಪುಷ್ಟವಾಗಿಸಲು ಪೂರ್ವಗ್ರಹರಹಿತ, ಸಂಘಟಿತ ಪ್ರಯತ್ನ ಮಾಡೋಣ. ಕನ್ನಡ ಉಲಿಯುವ ಬಗ್ಗೆ ಮತ್ತು ಉಳಿಸುವ ಬಗ್ಗೆ ಹೆಮ್ಮೆ ಪಡೋಣ, ಕನ್ನಡವನ್ನು ಮತ್ತಷ್ಟು ಸಮೃದ್ಧವಾಗಿಸೋಣ.

5 COMMENTS

  1. kannadigarige kannada bareyalu odalu kastavaguttide endare, idu namma so called international primary school galindagi..

    • ಖಂಡಿತಾ ಹೌದು ಕಾರ್ತಿಕ್. ಕಷ್ಟವಾಗುವುದು ಯಾಕೆಂದರೆ, ಎಸ್ಸೆಸ್ಸೆಲ್ಸಿ ಪೂರೈಸಿದವರೂ ಸೋಕಾಲ್ಡ್ ಅಂತಾರಾಷ್ಟ್ರೀಯ ಶಾಲೆಗಳಲ್ಲಿ ಕನ್ನಡ ಪಂಡಿತರು ಅಂತ ಮಾನ್ಯತೆ ಗಳಿಸಿಕೊಳ್ಳಲೇಬೇಕಾದ ಅನಿವಾರ್ಯತೆ!

Leave a Reply to Karthik YR Cancel reply

Please enter your comment!
Please enter your name here